ಮಂಗಳೂರು: ಕರಾವಳಿ ಪ್ರದೇಶವಾದ ಮಂಗಳೂರಿನಲ್ಲಿ ಗುರುವಾರ ರಾತ್ರಿ ಅಕಾಲಿಕ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಕರಾವಳಿ ಜನತೆಗೆ ವರುಣ ತಂಪೆರೆದಿದ್ದಾನೆ. ಭಾರಿ ಗುಡುಗು-ಸಿಡಿಲು ಹಾಗೂ ಮಿಂಚು ಇದ್ದ ಕಾರಣ ಕೆಲವೆಡೆ ಹಾನಿಯುಂಟಾಗಿದೆ.
ನಗರದ ಹಳೆ ಬಂದರಿನಲ್ಲಿ ತೇಲುವ ರೆಸ್ಟೋರೆಂಟ್ ಎಂದೇ ಕರೆಯಲಾಗುವ ಕ್ರೂಸ್ ಆಂಡ್ ಡೈನ್ ರೆಸ್ಟೋರೆಂಟ್ ಗುರುವಾರ ರಾತ್ರಿ ಸುರಿದ ಧಾರಾಕಾರ ಗಾಳಿ ಮಳೆಗೆ ಸಂಫೂರ್ಣ ಹಾನಿಯಾಗಿದೆ.
ನೀರಿನಲ್ಲಿ ತೇಲಾಡುವ ಈ ಬೋಟ್ ರೆಸ್ಟೋರೆಂಟ್, ಮಂಗಳೂರಿನ ಚರಣ್ ಎಂಬುವವರಿಗೆ ಸೇರಿದೆ ಎನ್ನಲಾಗಿದೆ. ಧಕ್ಕೆಯ ಬಳಿ ನೀರಿನಲ್ಲಿರುವ ಈ ಬೋಟ್ ಮೀನುಗಾರಿಕೆಗೆ ಬಳಕೆಯಾಗದೇ ಇದರಲ್ಲಿ ರೆಸ್ಟೋರೆಂಟ್ ನಡೆಸಲಾಗುತ್ತಿತ್ತು.
ಗುರುವಾರ ರಾತ್ರಿ ಸಮಯದಲ್ಲಿ ಭಾರಿ ಗಾಳಿ, ಸಿಡಿಲು ಮಿಂಚು ಸಹಿತ ಸುರಿದ ಧಾರಾಕಾರ ಮಳೆಗೆ ಬೋಟ್ ತತ್ತರಿಸಿ ಹೋಗಿದೆ. ಗಾಳಿ ಹಾಗೂ ಸಿಡಿಲು ಬಡಿದು ಬೋಟ್ ರೆಸ್ಟೋರೆಂಟ್ ಗೆ ಹಾನಿ ಉಂಟಾಗಿರಬಹುದು ಎಂದು ಊಹಿಸಲಾಗಿದೆ.