ಬೆಳ್ತಂಗಡಿ: ವ್ಯಕ್ತಿಯೊರ್ವರ ಎದೆಗೆ ಗುಂಡು ತಗುಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಅಂಬಟೆಮಲೆ ಎಂಬಲ್ಲಿ ನಡೆದಿದೆ. 45 ವರ್ಷದ ಜೇಮ್ಸ್ ಎಂಬುವರೇ ಮೃತಪಟ್ಟ ವ್ಯಕ್ತಿಯಾಗಿದ್ದು, ಇವರು ಸನಿಹದ ಬೈಜು ಎಸ್ಟೇಟ್ ಎಂಬಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.
ಇವರು ಮೇ.30 ರಂದು ರಾತ್ರಿ ಪಾಳಿಯ ಕೆಲಸಕ್ಕೆಂದು ಸಂಜೆ 6 ಗಂಟೆಗೆ ಮನೆ ಬಿಟ್ಟಿದ್ದರು. ರಾತ್ರಿ ಸಮಯದಲ್ಲಿ ಕಾಡು ಪ್ರಾಣಿಗಳ ಭಯಕ್ಕೆ ದಿನಂಪ್ರತಿ ಬಂದೂಕು ಹಿಡಿದು ಕೆಲಸಕ್ಕೆ ಹೋಗುತ್ತಿದ್ದರು.
ಆದರೆ ಕೆಲಸಕ್ಕೆ ಹೋದ ಜೇಮ್ಸ್ ಅವರು ಎಂದಿನಂತೆ ಮರುದಿನ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಜೇಮ್ಸ್ ಅವರ ಮೃತದೇಹ ಅಂಬಟೆ ಮಲೆ ನದಿಯ ದಡದಲ್ಲಿ ಪತ್ತೆಯಾಗಿದೆ.
ಹೊಳೆ ದಾಟುವ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದ ಸಂದರ್ಭದಲ್ಲಿ ಅವರ ಬಳಿ ಇದ್ದ ಲೈಸನ್ಸ್ ಹೊಂದಿದ ಡಬ್ಬಲ್ ಬ್ಯಾರಲ್ ಗನ್ ಎದೆಯ ಭಾಗಕ್ಕೆ ಸಿಡಿದಿದ್ದು ಗಂಭೀರವಾಗಿ ಗಾಯಗೊಂಡ ಜೇಮ್ಸ್ ಪಿ.ಜೆ ಅವರು ಸ್ಥಳದಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ ಜಿ ಅವರು ಪರಿಶೀಲನೆ ನಡೆಸಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.