ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್ ಅವರು ಬಹುಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ವಿರುದ್ಧ ಸುಮಾರು 19980 ಮತಗಳಿಂದ ಕೋಟ್ಯಾನ್, ಜಯಭೇರಿ ಬಾರಿಸಿದ್ದಾರೆ. ಶಾಸಕ ಅಭಯಚಂದ್ರ ಜೈನ್ 57374 ಮತಗಳನ್ನು ಗಳಿಸಿದ್ದಾರೆ.
15ನೇ ಸುತ್ತಿನ ಮತ ಎಣಿಕೆಯಲ್ಲಿ ಉಮನಾಥ ಕೋಟ್ಯಾನ್ ಅವರು 87027 ಮತಗಳನ್ನು ಗಳಿಸಿ, ಗೆಲುವಿನ ನಗೆ ಬೀರಿದ್ದಾರೆ.
ಇದೀಗ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿರುವ ಉಮನಾಥ್ ಕೋಟ್ಯಾನ್ ಅವರು ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡವರು. ರಂಗಭೂಮಿಯಲ್ಲಿ ಪಳಗಿರುವ ಇವರು, ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ನಟನಾಗಿ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಕಾರಣ ಇವರಿಗೆ ಸಹಜವಾಗಿ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಬಗ್ಗೆ ಗೊತ್ತೇ ಇದೆ. ಈ ಕಾರಣದಿಂದ ಇವರು ಬಿಜೆಪಿ ಪಕ್ಷದಲ್ಲಿ ತಮ್ಮ ಒಲವು ತೋರಿದರು.
ತಮ್ಮ ಪ್ರಾಮಾಣಿಕ ಕೆಲಸ, ಪಕ್ಷ ನಿಷ್ಟೆಯಿಂದ ಜನಮನ್ನಣೆ ಗಳಿಸಿ ತಾಲೂಕು ಪಂಚಾಯತ್ ಸದಸ್ಯರಾಗಿ ಜನ ಸೇವೆ ಮಾಡಿದ್ದಾರೆ. ತದನಂತರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ, ಮೂಡಬಿದಿರೆ ಕ್ಷೇತ್ರದ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅನುಭವ ಕೂಡ ಇವರಿಗಿದೆ.
ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರವಾಗಿ ಹಲವು ಕಾರ್ಯಕ್ರಮಗಳನ್ನು ಕರಾವಳಿಯಲ್ಲಿ ಆಯೋಜಿಸಿದ್ದಲ್ಲದೇ, ತುಳು ಭಾಷೆಯನ್ನು ಸಂವಿಧಾನದ ಹದಿನೆಂಟನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದೆಹಲಿ ತನಕ ಮನವಿಯನ್ನು ತೆಗೆದುಕೊಂಡು ಹೋಗಿದ್ದರು ಅನ್ನೋದು ಕರಾವಳಿ ಜನತೆಗೆ ಹೆಮ್ಮೆಯ ವಿಷಯ.
ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪರಿಶ್ರಮ ವಹಿಸಿರುವ ಉಮನಾಥ ಕೋಟ್ಯಾನ್ ಅವರು ಜನಪರವಾಗಿ ಕೂಡ ಕೆಲಸ ಮಾಡಿದ್ದು, ಸರಕಾರಿ ಕಚೇರಿಗಳಲ್ಲಿ ನಡೆಯುವ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತಿದವರಲ್ಲಿ ಇವರು ಒಬ್ಬರು.
ಸರಳ ಮತ್ತು ಸಜ್ಜನಿಕೆಯ, ನೇರ ನಡೆ ನುಡಿಯ ವ್ಯಕ್ತಿತ್ವವುಳ್ಳ ಉಮನಾಥ ಕೋಟ್ಯಾನ್ ಅವರು ಈ ಬಾರಿ ಗೆಲುವು ಸಾಧಿಸಿದ್ದು, ಪಕ್ಷದ ಕಾರ್ಯಕರ್ತರ ಮುಖದಲ್ಲಿ ನಗು ಅರಳಿಸಿದೆ.