ಪುತ್ತೂರು: ಬಂದೂಕಿಗೆ ತುಂಬಿಸುವ ಮದ್ದುಗುಂಡು (ತೋಟೆ) ಕೆಳಗೆ ಬಿದ್ದು ಸ್ಪೋಟಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಇಬ್ಬರಿಗೆ ಗಾಯವಾದ ಘಟನೆ ಪಾಣಾಜೆ ಗ್ರಾಮದ ಎಣ್ಣೆಗದ್ದೆಯಲ್ಲಿ ಸೆ.27ರಂದು ರಾತ್ರಿ ನಡೆದ ಬಗ್ಗೆ ತಡವಾಗಿ ವರದಿಯಾಗಿದೆ.
ಪಾಣಾಜೆ ಗ್ರಾಮದ ಎಣ್ಣಗದ್ದೆ ನಿವಾಸಿ ಅಬ್ದುಲ್ ಅಜೀಜ್(65) ಎಂಬವರ ಮನೆಯಲ್ಲಿ ಸ್ಪೋಟ ಸಂಭವಿಸಿದ್ದು, ಅವರು ಪರವಾನಿಗೆ ಬಂದೂಕು ಹೊಂದಿದ್ದು, ಸೆ.27ರಂದು ರಾತ್ರಿ ಬಂದೂಕಿನ ಮದ್ದುಗುಂಡು(ತೋಟೆ) ಮನೆಯಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿತ್ತು. ತೋಟೆ ಬಿದ್ದ ರಭಸಕ್ಕೆ ಅದರಲ್ಲಿನ ಚಿಲ್ಲುಗಳು ಸಿಡಿದು ಮನೆಯಲ್ಲಿದ್ದ ಸಿನಾನ್ ಮತ್ತು ಅಬ್ದುಲ್ ಖಲೀಲ್ ಎಂಬವರ ಕೈ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದೆ.
ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಪ್ರಕರಣದ ಕುರಿತು ಸಂಪ್ಯ ಪೊಲೀಸರು ತನಿಖೆ ನಡೆಸಿದ್ದು, ಬಂದೂಕು ಪರವಾನಿಗೆ ಹೊಂದಿರುವ ಅಬ್ದುಲ್ ಅಜೀಜ್ ಅವರು ಅಸುರಕ್ಷಿತ ರೀತಿಯಲ್ಲಿ ಬಂದೂಕಿನ ಗುಂಡನ್ನು ಇಟ್ಟಿರುವುದು ಕಂಡು ಬಂದಿದ್ದು, ಈ ಕುರಿತು ಸೂಕ್ತ ಕಾನುನು ಕ್ರಮವನ್ನು ಅಬ್ದುಲ್ ಅಜೀಜ್ ಅವರ ಮೇಲೆ ಪೊಲೀಸರು ಕೈಗೊಂಡಿದ್ದಾರೆ.