ಬೆಳ್ತಂಗಡಿ: ಕೇವಲ ಒಂದೂವರೆ ನಿಮಿಷದಲ್ಲಿ ಪೆನ್ಸಿಲ್ ಲೆಡ್ ನಲ್ಲಿ 3 ಗಣೇಶನ ಆಕೃತಿಯನ್ನು ರಚಿಸಿದ ಉಡುಪಿಯ ಸಂಜಯ್ ದಯಾನಂದ ಅವರು ವರ್ಡ್ಸ್ ಕಿಂಗ್ ವಿಶ್ವದಾಖಲೆಗೆ ಭಾಜನರಾಗಿದ್ದಾರೆ.
ಸಂಜಯ್ ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತನ್ನ ಸಾಧನೆಯ ವಿವರಗಳನ್ನು ನೀಡಿದರು.
ಸಂಜಯ್ ಅವರು ಇಂಡಿಯನ್ ಸ್ಟಾರ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ರೆಕಾರ್ಡ್ಸ್, ಏಷಿಯಾ ಬುಕ್ ರೆಕಾರ್ಡ್, ನೇಪಾಳ ಬುಕ್ ರೆಕಾರ್ಡ್, ಬಾಂಗ್ಲಾ ಬುಕ್ ರೆಕಾರ್ಡ್, ಇಂಡೋನೇಶಿಯಾ ಬುಕ್ ರೆಕಾರ್ಡ್ ಹಾಗೂ ವಿಯೆಟ್ನಾಂ ಬುಕ್ ರೆಕಾರ್ಡ್ ಗಳಲ್ಲಿ ದಾಖಲೆಗಳನ್ನು ನಿರ್ಮಿಸಿ ಮಾನ್ಯತೆ ಪಡೆದ ಬಳಿಕ ಇದೀಗ ವರ್ಡ್ಸ್ ಕಿಂಗ್ ವಿಶ್ವದಾಖಲೆಯಲ್ಲಿ ಅವರ ಹೆಸರು ನಾಮಾಂಕಿತವಾಗಿದೆ. ಏಷ್ಯಾದ 100 ಮಂದಿ ಉನ್ನತ ಸಾಧಕರಲ್ಲಿ ಸಂಜಯ್ ಅವರ ಹೆಸರು ಇದ್ದು ಕಳೆದ ನ. 11ರಂದು ನವದೆಹಲಿಯಲ್ಲಿ ವರ್ಡ್ಸ್ ಕಿಂಗ್ಸ್ ವಿಶ್ವದಾಖಲೆ ಪ್ರಮಾಣಪತ್ರ ನೀಡಲಾಗಿದೆ. ಇದಕ್ಕೂ ಮೊದಲು ಇವರು 2011ರಲ್ಲಿ ಪೆನ್ಸಿಲ್ ಲೆಡ್ ನಲ್ಲಿ ಗಣಪತಿಯನ್ನು ರಚಿಸಿದ ಬಗ್ಗೆ ಗಿನ್ನೆಸ್ ಅಧಿಕಾರಿಗಳು ಇವರಿಗೆ ಅತೀ ಸಣ್ಣ ಗಣಪತಿ ರಚನೆಕಾರ ಎಂದು ಪರಿಗಣಿಸಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಎಂದು ಪ್ರಮಾಣಪತ್ರ ನೀಡಿ ಪುರಸ್ಕರಿಸಿದೆ.
ಸಂಜಯ್ ಅವರು, ಪೆನ್ಸಿಲ್ ನ ತುದಿಯ ಲೆಡ್ ನಲ್ಲಿ ಕೇವಲ ಒಂದೂವರೆ ನಿಮಿಷದಲ್ಲಿ ಒಂದೂವರೆ ಮೀ.ಮೀ. ಅಳತೆಯ ಮೂರು ಗಣಪತಿಗಳನ್ನು ಮೂಡಿಸಿದ್ದಾರೆ. ಕುಳಿತುಕೊಂಡ, ನಿಂತ ಹಾಗೂ ಒಂದೇ ಕಾಲಿನಲ್ಲಿ ನಿಂತ ಗಣಪತಿಗಳನ್ನು ಸೂಕ್ಷ್ಮ ಕಲೆಯನ್ನು ಯಾವುದೇ ಮಸೂರಗಳನ್ನು ಬಳಸದೆ ಅತೀ ಶೀಘ್ರವಾಗಿ (ಮೈಕ್ರೋ ಆರ್ಟ್)ರಚಿಸಿ ಅಚ್ಚರಿ ಮೂಡಿಸಿದ್ದಾರೆ. ಇಷ್ಟೇ ಅಲ್ಲದೆ ಇದಕ್ಕಿಂತ ಮೊದಲು ಅವರು ಕೃಷ್ಣನ, ಮಂಜುನಾಥ ಸ್ವಾಮಿಯ ಹಾಗು ವಿವಿಧ ಕಟ್ಟಡಗಳ, ಐಫೆಲ್ ಟವರ್ ನ ಆಕೃತಿಗಳನ್ನು ಮೂಡಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಉಡುಪಿಯ ನೀರ್ಮಕ್ಕಿಯ ಶಾಲಾ ಬಸ್ ಚಾಲಕ ದಯಾನಂದ-ಸುನೀತಾ ಅವರ ಮೂವರು ಪುತ್ರರಲ್ಲಿ ಸಂಜಯ್ ಹಿರಿಯರಾಗಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಸಂಜಯ್ ಅವರನ್ನು ಕರೆಸಿ ಅವರ ಸಾಧನೆಗೆ ಬೇಕು ಬೇಕಾದ ಮಾರ್ಗದರ್ಶನ, ಸಹಾಯವನ್ನು ಮಾಡಿದ್ದಾರೆ.
ಇಷ್ಟೇ ಅಲ್ಲದೆ ವಿಕ್ಟರಿ ಬಾಯ್ಸ್ ಎಂಬ ತುಳು ಕಿರುಚಿತ್ರವನ್ನೂ ನಿರ್ಮಿಸಿ, ನಿರ್ದೇಶಿಸಿದ್ದು ಧರ್ಮಸ್ಥಳ ಕ್ಷೇತ್ರದಲ್ಲಿ ಸೋಮವಾರ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ ಚಲನಚಿತ್ರವನ್ನು ನಿರ್ಮಿಸಲು ಉದ್ದೇಶಿಸಿದ್ದು, ಚಿತ್ರದ ಮುಹೂರ್ತ ಈಗಾಗಲೇ ನಡೆಸಲಾಗಿದೆ.
2010ರಲ್ಲಿ ಗುಜರಾತಿನ ಕಲಾವಿದನೊಬ್ಬನ ಅಕ್ಕಿಯಲ್ಲಿ ಮೂಡಿಸಿದ ಕಲೆಯನ್ನು ನೋಡಿ ಅದರಿಂದ ಸ್ಪೂರ್ತಿಗೊಂಡು ಪೆನ್ಸಿಲ್ ಲೆಡ್ ನತ್ತ ಗಮನಹರಿಸಿದೆ. ಬರಬರುತ್ತಾ ಸೂಕ್ಷ್ಮ ಕಲೆಯ ಸೂಕ್ಷ್ಮಗಳು ಗೊತ್ತಾದವು. ಹೀಗಾಗಿ ಇನ್ನಷ್ಟು ಹೆಚ್ಚಿನ ಸಾಧಿಸಬೇಕು ಎಂಬ ಛಲ ಬೆಳೆಯಿತು. ಬಳಿಕ ಧರ್ಮಾಧಿಕಾರಿ ಡಾ| ವೀರೆಂದ್ರ ಹೆಗ್ಗಡೆಯವರಲ್ಲಿ ನನ್ನ ಸಾಧನೆ ಹೇಳಿಕೊಂಡೆ. ಅವರು ನನ್ನನ್ನು ಆಶೀರ್ವದಿಸಿದ್ದು ಮಾತ್ರವಲ್ಲದೆ ನನ್ನ ಕಲೆಗೆ ಬೇಕು ಬೇಕಾದ ಮಾರ್ಗದರ್ಶನಗಳನ್ನು ಆಗ್ಗಾಗ್ಗೆ ನೀಡುತ್ತಾ ಬಂದಿದ್ದಾರೆ ಎಂದು ಸಂಜಯ್ ತಿಳಿಸಿದ್ದಾರೆ.