ಮೈಸೂರು: ಯಡಿಯೂರಪ್ಪನ ಪುತ್ರ ಏನ್ ದೇವಲೋಕದಿಂದ ಬಂದಿದ್ದಾನಾ? ಯಡಿಯೂರಪ್ಪನೇ ಬಂದು ವರುಣಾ ಕ್ಷೇತ್ರದಲ್ಲಿ ಬಂದು ನಿಂತುಕೊಳ್ಳುವುದಕ್ಕೇ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗ ಪ್ರಸಂಗ ಸೋಮವಾರ ನಡೆಯಿತು.
ಇಂದು ನಗರದ ಸಿಎಂ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪನ ಪುತ್ರ ವರುಣಾ ಕ್ಷೇತ್ರ ಮತ್ತು ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಾರೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗರಂ ಆದ ಸಿಎಂ, ಅನಾವಶ್ಯಕ ಪ್ರಶ್ನೆಗಳನ್ನು ಕೇಳಬೇಡಿ, ಯಡಿಯೂರಪ್ಪನ ಪುತ್ರ ಏನ್ ದೇವಲೋಕದಿಂದ ಬಂದಿದ್ದಾನಾ? ಯಡಿಯೂರಪ್ಪನೇ ಬಂದು ವರುಣಾ ಕ್ಷೇತ್ರದಲ್ಲಿ ಬಂದು ನಿಂತುಕೊಳ್ಳುವುದಕ್ಕೆ ಹೇಳಿ ಎಂದು ಗರಂ ಆಗಿಯೇ ಉತ್ತರಿಸಿದ ಸಿಎಂ, ಯಡಿಯೂರಪ್ಪನವರಿಗೂ ನಮ್ಮ ಕ್ಷೇತ್ರಕ್ಕೂ ಏನ್ ಸಂಬಂಧ? ಜನರ ಕಷ್ಟ ಸುಖಗಳಿಗೆ ಅವರ ಆಗಿದ್ದಾರಾ? ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ಅವರಾ? 35 ವರ್ಷಗಳಿಂದ ನಾನು ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿರುವುದು. ಕ್ಷೇತ್ರದ ಅಭಿವೃದ್ದಿ ಮಾಡಿದ್ದೇನೆ. ನನ್ನ ಶ್ರಮ ವ್ಯರ್ಥವಾಗುತ್ತಾ? ಯಾರು ಬಂದ ತಕ್ಷಣ ಜನ ಅವರಿಗೆ ಓ ಎಂದು ಬಿಡುತ್ತಾರಾ? ಇದಕ್ಕೆಲ್ಲಾ ಮಹತ್ವ ಕೊಡಬಾರದು. ಜನರನ್ನು ಯಾಮಾರಿಸುವುದು ಸುಲಭವಲ್ಲ. ನರೇಂದ್ರ ಮೋದಿ, ಶಾ ಬಂದ ತಕ್ಷಣ ಅಲ್ಲಿನ ಜನರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಶಾ ಒಂದು ಪಾರ್ಟಿಯ ಅಧ್ಯಕ್ಷ, ಅವರ ಕೆಲಸ ಅವರು ಮಾಡಿ ಹೋಗಿದ್ದಾರೆ. ಅಂತಿಮವಾಗಿ ಜನರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ಒಂದು ವೇಳೆ ನನ್ನ ಮಗ ಆ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಜನ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಓಟ್ ಹಾಕುವುದಿಲ್ಲ, ನಾನು ಏನು ಕೆಲಸ ಮಾಡಿದ್ದೇನೆ ಅದರ ಮೇಲೆ ಓಟ್ ಹಾಕುತ್ತಾರೆ. ಒಂದು ಜಾತಿ ಮತ್ತು ವ್ಯಕ್ತಿಯನ್ನ ನೋಡಿ ಕೊಂಡು ಓಟ್ ಹಾಕುವುದಿಲ್ಲ. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ತುಂಬ ವ್ಯತ್ಯಾಸವಿದೆ ಎಂದರು.
ತಮಿಳುನಾಡು ಬಂದ್ ಕರೆ ನೀಡಿರುವುದು, ಚುನಾವಣೆಯ ಗಿಮಿಕ್ ಆಗಿದೆ. ಆರು ವಾರದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ಕುರಿತು ಸ್ಕೀಂ ತಯಾರಿಸುವಂತೆ ಹೇಳಿದೆ. ಆದರೆ ಭಾರತ ಸರ್ಕಾರ ಸಮಯ ಕೇಳಿದೆ. ಆದ್ದರಿಂದ ನ್ಯಾಯಾಲಯವು ಸರಿಯಾದ ತೀರ್ಮಾನ ಕೈಗೊಳ್ಳಲಿದೆ. ಮೇಕೆದಾಟು ಮಾಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಡಿಪಿಆರ್ ಮಾಡಿ ಕೇಂದ್ರ ಸರ್ಕಾರದ ಅನುಮತಿಗೆ ಕಳುಹಿಸಲಾಗಿದೆ. ಸುಮಾರು 6 ಸಾವಿರ ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ಈ ಯೋಜನೆಯಿಂದ ಯಾರಿಗೂ ತೊಂದರೆಯಾಗಲ್ಲ. ತಮಿಳುನಾಡಿಗೆ 177.27 ಟಿಎಂಸಿ ನೀರು ಕೊಡುವುದನ್ನು ಕೊಡಲೇಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ 6 ವಾರದಲ್ಲಿ ಕಾವೇರಿ ನಿರ್ವಾಹಣಾ ಮಂಡಳಿ ರಚನೆ ಮಾಡಿ ಎಂದು ಹೇಳಿಲ್ಲ. ಸ್ಕೀಂ ಮಾಡಿ ಎಂದು ಹೇಳಿದ್ದಾರೆ. ನಮ್ಮ ಮತ್ತು ತಮಿಳುನಾಡಿನ ಅಭಿಪ್ರಾಯ ಪಡೆದು ಸ್ಕೀಂ ತಯಾರಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ನಮ್ಮ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ.
ಶಾಸಕ ಅಂಬರೀಷ್ ಗೆ ಟಿಕೆಟ್ ನೀಡುವುದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ದಲಿತರು ಸಿಎಂ ಆಗಬೇಕೆಂಬುದನ್ನು ಕನಸು ಕಾಣವುದರಲ್ಲಿ ತಪ್ಪೇನಿದೆ? ಎಲ್ಲರೂ ಸಿಎಂ ಆಗಬೇಕೆಂದು ಕನಸು ಕಾಣುತ್ತಾರೆ ಎಂದ ಸಿದ್ದರಾಮಯ್ಯ, ಪರಿವಾರ ಮತ್ತು ತಳವಾರ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು 2 ಬಾರಿ ಶಿಫಾರಸ್ಸು ಮಾಡಿದೆವು. ಆದರೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ನಿದ್ರೆ ಮಾಡುತ್ತಿತ್ತು. ಚುನಾವಣೆ ಬಂದರಿಂದ ಕ್ಯಾಬಿನೆಟ್ ನಲ್ಲಿ ಅನುಮತಿ ಪಡೆದಿದ್ದಾರೆ. ಇನ್ನೂ ಅದು ಆಗಬೇಕಾದರೆ, ಸಂಸತ್ ನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮತಿ ಪಡಯಬೇಕಾಗಿದೆ. ಅನುಮತಿ ಸಿಕ್ಕರೆ ನನಗೆ ಸಂತೋಷ ಎಂದರು.