ಮಂಗಳೂರು: ನಾನು ಹಿಂದೂ ಸಂಘಟನೆಯಲ್ಲಿದ್ದುಕೊಂಡು ಸಮಾಜಕ್ಕಾಗಿ ಹಣ ಖರ್ಚು ಮಾಡಿದ್ದೇನೆಯೇ ಹೊರತು, ಇದುವರೆಗೆ ಹಣ ಸಂಪಾದನೆ ಮಾಡಿಲ್ಲವೆಂದು ಬಿಜೆಪಿ ಮಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್ ತನ್ನ ಮೇಲೆ ಮಾಡಿದ ಆರೋಪಗಳಿಗೆ ಸ್ಪಷ್ಟನೆ ನೀಡಿದರು.
ಹಣ ಮಾಡಿದ್ದೇನೆಂದು ತನ್ನ ಮೇಲೆ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಕಲ್ ಅವರು, ಸಣ್ಣ ವಯಸ್ಸಿನಲ್ಲೇ ಸಂಘಟನೆಗೆ ಸೇರಿದೆ. ಅಂದಿನಿಂದ ಇಂದಿನವರೆಗೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಆದರೆ ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.
ಎಂಆರ್ ಪಿಎಲ್, ಎಸ್ ಈ ಝಡ್ ನಲ್ಲಿ ನಾನು ಕಮಿಷನ್ ಪಡೆದು ಹಣ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ತನ್ನ ವಿರುದ್ಧ ಹಣ ಮಾಡಿದ್ದೇನೆಂದು ಆರೋಪ ಮಾಡಿರುವವರು ಯಾವುದಾದರೂ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ನಾನು ಸಾಲ ಮಾಡಿ ಮನೆ ಕಟ್ಟಿದ್ದೇನೆ. 85 ಲಕ್ಷ ರೂ. ಸಾಲ ನನ್ನ ಮೇಲಿದೆ. ನನ್ನ ತಂದೆ-ತಾಯಿ, ಹೆಂಡತಿ, ಮಕ್ಕಳಿಗೆ ನ್ಯಾಯ ಕೊಡಲು ಸಾಧ್ಯವಾಗಲಿಲ್ಲ. ಕಟ್ಟಿರುವ ಮನೆಗೆ ಯಾವಾಗ ಪೈಂಟ್ ಮಾಡಿಸುತ್ತೀರೆಂದು ಮಗ ಕೇಳುತ್ತಾನೆ. ಸಾಲವೇ ನನ್ನ ಮನೆಯವರಿಗೆ ಆಸ್ತಿ ಎಂದು ತನ್ನ ನೋವು ತೋಡಿಕೊಂಡರು.
ಟಿಕೆಟ್ ನೀಡದೇ ಇದ್ದಾಗ ಆಗಿರುವ ನೋವಿಗಿಂತಲೂ ನನ್ನ ಮೇಲೆ ಆರೋಪ ಕೇಳಿಬಂದಾಗ ಹೆಚ್ಚಿನ ನೋವಾಗಿತ್ತು. ನಾನು ಯಾರ ಪರವು ಪ್ರಚಾರ ಮಾಡುತ್ತಿಲ್ಲ. ಈಗ ತಟಸ್ಥವಾಗಿ ನಿಂತಿದ್ದೇನೆ. ಮೇ 20ರಂದು ನನ್ನ ನಿಲುವು ಪ್ರಕಟಿಸಲಿದ್ದೇನೆ ಎಂದರು.