ಬಂಟ್ವಾಳ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಪಾತಾಳಕ್ಕೆ ಕುಸಿದರೂ, ಕೇಂದ್ರ ಸರ್ಕಾರ ಜನರನ್ನು ಮರುಳು ಮಾಡಿ ಪೆಟ್ರೋಲ್, ಡಿಸೇಲ್ ಏರಿಕೆ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.
ಅವರು ಸೋಮವಾರ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿ.ಸಿ.ರೋಡು ಕೈಕಂಬದಿಂದ ಬಿ.ಸಿ.ರೋಡು ಜಂಕ್ಷನ್ ವರೆಗೆ ನಡೆದ ಪ್ರತಿಭಟನಾ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೆ ಯುಪಿಎ ಅವಧಿಯಲ್ಲಿ ತೈಲ ಬೆಲೆ 140 ಡಾಲರ್ ಇದ್ದಾಗ, ಪೆಟ್ರೋಲ್, ಡಿಸೇಲ್ ಬೆಲೆ 60 ರೂ.ಗಳಿಗಿಂತಲೂ ಕಡಿಮೆ ಇತ್ತು. ಆದರೆ ಈಗ 40 ಡಾಲರ್ ಗೆ ತಲುಪಿದರೂ, ಕೇಂದ್ರ ಸರ್ಕಾರ ಬೆಲೆಯನ್ನು ಗಗನಕ್ಕೇರಿಸುತ್ತಿದೆ. ಇದರಿಂದಾಗಿ ದಿನಬಳಕೆಯ ವಸ್ತುಗಳಿಗೂ ಬೆಲೆ ಏರಿಕೆಯಾಗುವ ಅಪಾಯ ಎದುರಾಗಿದೆ ಎಂದು ಆರೋಪಿಸಿದರು. ದೇಶದ ಆರ್ಥಿಕ ಸಂಕಷ್ಟಕ್ಕೆ ಕೊರೋನಾ ಒಂದೇ ಕಾರಣವಲ್ಲ, ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೂ ಕಾರಣ ಎಂದವರು ಟೀಕಿಸಿದರು.
ಪಾದಯಾತ್ರೆ ಸಂದರ್ಭದಲ್ಲಿ ಬೆಲೆ ಏರಿಕೆಯನ್ನು ಖಂಡಿಸಿ ಜೀಪಿಗೆ ಹಗ್ಗ ಕಟ್ಟಿ ಏಳೆಯಲಾಯಿತು. ಬಳಿಕ ತಹಶೀಲ್ದಾರ್ ಮೂಲಕ ಬೆಲೆ ಇಳಿಕೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ನೀಡಲಾಯಿತು.