News Karnataka Kannada
Sunday, April 28 2024
ಕರಾವಳಿ

ಗಡಿ ಗ್ರಾಮಗಳ ಮುಗಿಯದ ಸಂಚಾರ ವ್ಯಥೆ

Photo Credit :

 ಗಡಿ ಗ್ರಾಮಗಳ ಮುಗಿಯದ ಸಂಚಾರ ವ್ಯಥೆ

ಸುಳ್ಯ: ಅಂತಾರಾಜ್ಯ ಸಂಪರ್ಕ ಕಲ್ಪಸುವ ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶದಲ್ಲಿ ಜನರ ಸಂಚಾರದ ಕಥೆ ಮುಗಿಯದ ವ್ಯಥೆಯಾಗಿದೆ.


ಈ ಅಂತಾರಾಜ್ಯ ಸಂಪರ್ಕ ಸೇತುವಲ್ಲಿ ಕೇರಳದ ಭಾಗದಲ್ಲಿ ರಸ್ತೆ ಅಭಿವೃದ್ಧಿ ಪೂರ್ತಿಯಾಗಿದೆ. ಆದರೆ ಕರ್ನಾಟಕದ ಭಾಗ ಇನ್ನೂ ಅತಂತ್ರವಾಗಿದೆ. ಕರ್ನಾಟಕದ ಭಾಗ ಆಲೆಟ್ಟಿ ಗ್ರಾಮದ ಬಡ್ಡಡ್ಕದಿಂದ ಕೇರಳದ ಗಡಿ ಬಾಟೋಳಿವರೆಗೆ ಸುಮಾರು ಒಂದು ಕಿಲೋಮೀಟರ್ ರಸ್ತೆಯ ಸ್ಥಿತಿ ಅಯೋಮವಾಗಿದೆ. ಒಟ್ಟು 20 ಕಿ.ಮಿ.ದೂರದ ಈ ರಸ್ತೆಯಲ್ಲಿ ಕರ್ನಾಟಕದ ಭಾಗ 10 ಕಿ.ಮಿ.ಇದೆ. ಇದರಲ್ಲಿ ಸುಳ್ಯದಿಂದ ಬಡ್ಡಡ್ಕದ ವರೆಗೆ ಎರಡು ವರ್ಷಗಳ ಹಿಂದೆ ಅಭಿವೃದ್ಧಿ ಕಂಡಿತ್ತು. ಆದರೆ ಬಡ್ಡಡ್ಕದಿಂದ ಗಡಿಗೆ ಒಂದು ಕಿ.ಮಿ. ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರಯಾಣ ದೇವರಿಗೇ ಪ್ರೀತಿ ಎಂಬಂತಿಂದೆ. ದಶಕದ ಹಿಂದೆ ಡಾಮರು ಕಂಡಿದ್ದ ಇಲ್ಲಿ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದೆ. ಅಲ್ಲಲ್ಲಿ ಡಾಮರಿನ ಪಳೆಯುಳಿಕೆಗಳು ಮಾತ್ರ ಉಳಿದುಕೊಂಡಿದ್ದು ಆಳೆತ್ತರದ ಹೊಂಡಗಳು ಬಾಯ್ದೆರೆದು ನಿಂತಿದೆ.

ಮಳೆಗಾಲದಲ್ಲಿ ಮಳೆಯ ನೀರೆಲ್ಲ ರಸ್ತೆಯಲ್ಲೇ ಹರಿದು ತೋಡಿನಂತಾಗಿರುವ ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ಸಂಚಕಾರವನ್ನು ತರುತ್ತದೆ. ಈಗ ರಸ್ತೆ ಸಂಪೂರ್ಣ ನಾಶವಾಗಿದ್ದು ಧೂಳುಮಯವಾಗಿದೆ. ಸುಳ್ಯದಿಂದ ಆಲೆಟ್ಟಿ ಬಡ್ಡಡ್ಕ-ಕಲ್ಲಪಳ್ಳಿ ಮೂಲಕ ಕೇರಳದ ಪಾಣತ್ತೂರು, ಕಾಞಂಗಾಡ್, ಕೊಡಗಿನ ಕರಿಕೆ, ಮಡಿಕೇರಿಗಳಿಗೆ ಅತೀ ಸಮೀಪದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಯು ನೂರಾರು ಮಂದಿ ವಿದ್ಯಾರ್ಥಿಗಳಿಗೆ, ಸಾವಿರಾರು ಮಂದಿ ಸಾರ್ವಜನಿಕರಿಗೆ ಇರುವ ಏಕೈಕ ಆಶ್ರಯ. ಎರಡು ಬಸ್ ಗಳು ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತದೆ. ಈ ವಾಹನಗಳ ಯಾತ್ರಿಕರಿಗೆ ರಸ್ತೆಯು ಕಂಠಕ ಪ್ರಾಯವಾಗಿ ಪರಿಣಮಿಸಿದೆ. ಬೈಕ್, ಕಾರು ಯಾತ್ರಿಕರಂತು ರಸ್ತೆಯಲ್ಲಿ ಯಮ ಯಾತನೆ ಅನುಭವಿಸುವಂತಾಗಿದೆ. ಕೇರಳದ ಕಾಞಂಗಾಡ್ ನಿಂದ ಸುಳ್ಯಕ್ಕೆ ಈ ಮಾರ್ಗದಲ್ಲಿ ಕೇರಳ ಸರ್ಕಾರಿ ಬಸ್ ಗಳು ಕೆಲವು ವರ್ಷಗಳ ಹಿಂದೆಯೇ ಮಂಜೂರಾಗಿದ್ದರೂ ರಸ್ತೆಯ ಅವ್ಯವಸ್ಥೆಯಿಂದ ಅದು ಇನ್ನೂ ಸಂಚಾರ ಆರಂಭಿಸಿಲ್ಲ.                                                                                                                                                                                                                                                                                                                                                                                    
ಸುಳ್ಯದಿಂದ ಇದೇ ಅಂತಾರಾಜ್ಯ ರಸ್ತೆಯಲ್ಲಿ ಪ್ರಯಾಣಿಸಿ ಕರ್ನಾಟಕದ ಗಡಿ ದಾಟಿ ಕೇರಳಕ್ಕೆ ಪ್ರವೇಶಿಸಿದರೆ ಸುಂದರ ರಸ್ತೆಯು ತೆರೆದುಕೊಳ್ಳುತ್ತದೆ. ಕೇರಳದ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗಿ ಸರ್ವಋತು ರಸ್ತೆಯಾಗಿದೆ ನಳ ನಳಿಸುತಿದೆ. ಕೆಲವು ವರ್ಷಗಳ ಹಿಂದೆ ಕೇರಳದ ರಸ್ತೆಯ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಆದರೆ ಅಲ್ಲಿ ಈಗ ರಸ್ತೆ ಸಂಪೂರ್ಣ ಅಭಿವೃದ್ಧಿ ಕಂಡಿದೆ. ಈ ರಸ್ತೆಯಲ್ಲಿ ಅಭಿವೃದ್ಧಿಗೆ ಉಳಿದಿದ್ದ ಎರಡು ಕಿ.ಮಿ.ರಸ್ತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿಯಿಂದ ಮಂಜೂರು ಮಾಡಿದ 24 ಲಕ್ಷ ರೂ ಅನುದಾನದಲ್ಲಿ ಡಾಮರೀಕರಣ ಮಾಡಿ ಇತ್ತೀಚೆಗೆ ಅಭಿವೃದ್ಧಿ ಪಡಿಸಿದ್ದರು. ಇದರಿಂದ ಗಡಿಯಿಂದ ಪಾಣತ್ತೂರುವರೆಗೆ ಕೇರಳದ ಭಾಗ 10 ಕಿ.ಮಿ. ಸುಂದರ ರಸ್ತೆಯಾಗಿ ಸಂಚಾರ ಸುಗಮವಾಗಿದೆ.

ಕೊಚ್ಚಿ ಹೋದ ಭರವಸೆಗಳು:
ಗಡಿ ಪ್ರದೇಶದಲ್ಲಿ ಒಂದು ಕಿ.ಮಿ.ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಹಲವಾರು ವರ್ಷಗಳಿಂದ ಇರುವ ಬೇಡಿಕೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಕನ್ನಡಿಗರೇ ಹೆಚ್ಚಾಗಿರುವ ಗಡಿ ಗ್ರಾಮದ ಜನರು ತಟ್ಟದ ಕದಗಳಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ, ನಿವೇದನೆ ಸಲ್ಲಿಸಿದರೂ, ಮಾಧ್ಯಮಗಳು ರಸ್ತೆಯ ಅವಸ್ಥೆ ಹಲವು ಬಾರಿ ಎಳೆ ಎಳೆಯಾಗಿ ಬಿಚ್ಚಿಟ್ಟರೂ, ನಿರೀಕ್ಷೆಯ ಕದ ತೆರೆಯಲಿಲ್ಲ, ಸಂಬಂಧಪಟ್ಟವರ ಕಣ್ಣು ಮತ್ತು ಮನಸ್ಸು ಇನ್ನೂ ಈ ಕಡೆ ಹರಿದಿಲ್ಲ. ರಸ್ತೆಯನ್ನು ಅಭಿವೃದ್ಧಿ ಪಡಿಸುವುದಾಗಿ ಸುಳ್ಯ ಶಾಸಕರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಈ ಭಾಗದ ಮಾಜಿ ಜಿ.ಪಂ.ಸದಸ್ಯರು ಮತ್ತಿತ್ತರ ಜನಪ್ರತಿನಿಧಿಗಳು ಹಲವು ವರ್ಷಗಳಿಂದ ಹಲವು ಬಾರಿ ನೀಡಿದ ಎಲ್ಲಾ ಭರವಸೆಗಳು ಹುಸಿಯಾಗಿದೆ. ಇದುವರೆಗೂ ರಸ್ತೆ ಅಭಿವೃದ್ಧಿ ಪಡಿಸುವ ಯಾವುದೇ ಕ್ರಮವೂ ಕೈಗೊಂಡಿಲ್ಲ. ಈ ಮಳೆಗಾಲವೂ ರಸ್ತೆಯು ಹೊಳೆಯಾಗಿ ಮಾರ್ಪಡಾಗಲಿದೆ. ಒಂದು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಪಡಿಸಲು ಬೇಕಾಗುವ ಕೆಲವು ಲಕ್ಷಗಳನ್ನು ಬಿಡುಗಡೆ ಮಾಡಿ ಗಡಿನಾಡ ಜನರ ಕಷ್ಟಕ್ಕೆ ಸ್ಪಂದಿಸಲು ಯಾವುದೇ ಜನಪ್ರತಿನಿಧಿಯೂ ಆಸಕ್ತಿ ವಹಿಸಿಲ್ಲ ಎಂಬುದು ಜನರ ಆಕ್ರೋಶ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು