ಬೆಂಗಳೂರು: ನಗರದ ಹಲಸೂರು ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು, ಮೀನುಗಳ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ನಿನ್ನೆ ರಾತ್ರಿಯಿಂದ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿ ಕೆರೆಯ ದಡದಲ್ಲಿ ಬಂದು ತೇಲುತ್ತಿವೆ. ಕೆಲವರು ಮೀನಿನ ಸಾಂದ್ರತೆ ಹೆಚ್ಚಾಗಿ ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಹೀಗಾಗಿರಬಹುದು ಎಂದು ಅಭಿಪ್ರಾಯ ಪಟ್ಟರೆ, ಮತ್ತೊಂದು ಮಾಹಿತಿ ಪ್ರಕಾರ ಕೆರೆಯ ಒಂದು ಭಾಗದ ತಡೆಗೋಡೆ ಒಡೆದು ಕಲುಷಿತ ನೀರು ಕೆರೆಗೆ ಸೇರಿದ್ದು, ಮೀನುಗಳ ಸಾವಿಗೆ ಕಾರಣ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಮೀನುಗಳ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಸತ್ತ ಮೀನುಗಳು ನದಿ ದಡದ ಹತ್ತಿರ ರಾಶಿ ಬಿದ್ದಿದ್ದು, ಇದರಿಂದ ಗಬ್ಬು ವಾಸನೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ನರಕ ಯಾತನೆ ಪಡುವಂತಹ ಪರಿಸ್ಥಿತಿ ಬಂದಿದೆ. ಹಲಸೂರು ಕೆರೆಯಲ್ಲಿ ಏಕಾಏಕಿ ಇಷ್ಟು ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿರುವುದರ ಕುರಿತು ತನಿಖೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ಕೆರೆಯ ಸುತ್ತಲೂ ದೊಡ್ಡ ಅಪಾರ್ಟ್ಮೆಂಟ್ಗಳು, ರಕ್ಷಣಾ ಇಲಾಖೆ ಕಚೇರಿಗಳು, ಮದ್ರಾಸ್ ಎಂಜಿನಿಯರ್ಸ್ ಗ್ರೂಪ್ ಮುಂತಾದ ಕಚೇರಿಗಳು ಇವೆ. ಈ ಭಾಗದ ರಸ್ತೆಯಲ್ಲಿ ಓಡಾಡವವರ ಸಂಖ್ಯೆಯೂ ಹೆಚ್ಚಾಗಿದೆ. ಸತ್ತ ಮೀನಿನ ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.