ಕಾಸರಗೋಡು: ಕಾಸರಗೋಡು ಜಿಲ್ಲೆಯ ಆರು ಮಂದಿ ಸೇರಿದಂತೆ ಕೇರಳದ 16 ಮಂದಿ ಉಗ್ರಗಾಮಿ ಸಂಘಟನೆಯಾದ( ಇಸ್ಲಾಮಿಕ್ ಸ್ಟೇಟ್ ) ಐಎಸ್ ಗೆ ಸೇರ್ಪಡೆಗೊಂಡಿದ್ದಾರೆ ಎಂಬ ಸಂಶಯ ಬಲಗೊಂಡಿದೆ.
ಕಾಸರಗೋಡಿನ ಮೂರು ಕುಟುಂಬದ ಆರು ಮಂದಿ ಒಳಗೊಂಡಿದ್ದಾರೆ. ಉಳಿದವರು ಪಾಲಕ್ಕಾಡ್ ನಿವಾಸಿಗಳಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲ ದಿನಗಳ ಹಿಂದೆ ಸಂಬಂಧಿಕರೊಬ್ಬರ ಮೊಬೈಲ್ ಗೆ ಬಂದ ಸಂದೇಶ ಈ ಎಲ್ಲಾ ಸಂಶಯಕ್ಕೆ ಕಾರಣವಾಗಿದೆ. ನಾವು ಐ.ಎಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡಿದ್ದು, ನಮ್ಮ ಜೀವನವನ್ನು ದೇವರಿಗೆ ಸಮರ್ಪಿಸುತ್ತಿದ್ದವೇ ಎಂಬ ಸಂದೇಶ ಬಂದಿತ್ತು ಎನ್ನಲಾಗಿದೆ.
ಪಡನ್ನ, ತ್ರಿಕ್ಕರಿಪುರದ ದಂಪತಿ ಸೇರಿದಂತೆ ಆರು ಮಂದಿ ಒಳಗೊಂಡಿದ್ದಾರೆ ಎನ್ನಲಾಗಿದೆ. ಇವರು ಅಪಘಾನಿಸ್ತಾನ, ಸಿರಿಯಾ ಅಥವಾ ಇರಾಕ್ ಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇರಳದಲ್ಲಿ ನಾಪತ್ತೆಯಾದ 16 ಮಂದಿಯಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು, ಓರ್ವ ವೈದ್ಯ ಮತ್ತು ಇಂಜಿನೀಯರ್ ಒಳಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪ್ರವಾಸಕ್ಕೆ೦ದು ಇವರು ಜೂನ್ ಆರರಂದು ತೆರಳಿದ್ದು, ಬಳಿಕ ಇವರು ವಿದೇಶಕ್ಕೆ ಪಲಾಯನಗೈದ್ದಿದ್ದು, ಒಂದು ತಿಂಗಳಿಂದ ಇವರ ಮೊಬೈಲ್ ಗಳು ಸ್ವಿಚ್ಡ್ ಆಫ್ ಆಗಿವೆ ಇದರಿಂದ ಸಂಶಯ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಮುಖ್ಯಮಂತ್ರಿಗೆ ಮನವಿ
ಕುಟುಂಬ ಸದಸ್ಯರ ನಿಗೂಢ ನಾಪತ್ತೆ ಹಿನ್ನಲೆಯಲ್ಲಿ ಕಾಸರಗೋಡಿನ ಜನಪ್ರತಿನಿಧಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರನ್ನು ಭೇಟಿಯಾಗಿ ತನಿಖೆಗೆ ಒತ್ತಾಯಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ವಿಪಿಪಿ ಮುಸ್ತಾಫ ನೇತೃತ್ವದ ನಿಯೋಗ ಮುಖ್ಯಮಂತ್ರಿ ಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ನಡುವೆ ಕಾಸರಗೋಡು ಸಂಸದ ಪಿ. ಕರುಣಾಕರನ್ ಕೇಂದ್ರದ ಗಮನ ಸೆಳೆದಿದ್ದು, ಕೇಂದ್ರ ತನಿಖಾ ಸಂಸ್ಥೆ ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.