ಸುಳ್ಯ: ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮತ್ತೆ ಅಧಿಕವಾಗಿದೆ. ಜಾಲ್ಸೂರು ಸಮೀಪದ ಮಹಾಬಲಡ್ಕ, ಪಂಜಿಕಲ್ಲು ಭಾಗಗಳಲ್ಲಿ ಮತ್ತು ಮಂಡೆಕೋಲು ಗ್ರಾಮದ ಕಾಡುಸೊರಂಜ, ನೀರ್ಪಾಡಿ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಆಟಾಟೋಪ ಮಿತಿ ಮೀರಿದೆ.
ಜನವಸತಿ ಪ್ರದೇಶದ ಸಮೀಪದಲ್ಲೇ ಬೀಡು ಬಿಟ್ಟಿರುವ ಏಳು ಕಾಡಾನೆಗಳ ಹಿಂಡು ತೆಂಗು, ಕಂಗು, ಬಾಳೆ ಕೃಷಿಗಳನ್ನು ಪುಡಿಗಟ್ಟಿದೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಸೇರಿ ಪಟಾಕಿ ಸಿಡಿಸಿ, ಬೆಂಕಿ ಹಾಕಿ, ತಮಟೆ, ಚೆಂಡೆ ಬಾರಿ ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಪ್ರಯತ್ನ ನಡೆಸಿದರೂ ಮರಿ ಸಮೇತ ಇರುವ ಆನೆಗಳ ಹಿಂಡು ದೂರ ಸರಿಯದೆ ಜನವಸತಿ ಪ್ರದೇಶದ ಸಮೀಪದಲ್ಲೇ ಬೀಡು ಬಿಟ್ಟಿದ್ದು ನಾಡಿಗೆ ನುಗ್ಗುತಿದೆ. ಕಾರ್ಯಾಚರಣೆ ವೇಳೆ ಹಲವು ಬಾರಿ ಆನೆಗಳು ಜನರನ್ನು ಹಿಮ್ಮೆಟ್ಟಿಸಿದ್ದು ಆತಂಕ ಸೃಷ್ಟಿಸಿತು.
ಪಯಸ್ವಿನಿ ನದಿಯ ಎರಡೂ ಬದಿಯ ಎರಡೂ ರಾಜ್ಯದ ಗಡಿ ಗ್ರಾಮಗಳು ಹಲವು ದಿನಗಳಿಂದ ಕಾಡಾನೆಗಳ ಉಪಟಳದಿಂದ ನಲುಗಿ ಹೋಗಿದೆ.