ಉಡುಪಿ: ಕೃಷ್ಣ ಮಠದ ಮಧ್ವ ಸರೋವರದಲ್ಲಿ ಯಾತ್ರಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಮುಂಜಾವ ನಡೆದಿದೆ. ಮೃತರನ್ನು ಶಿವಮೊಗ್ಗ, ವಿದ್ಯಾನಗರ ನಿವಾಸಿ ಆದರ್ಶ್ (39) ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ 5.45 ರ ಹೊತ್ತಿಗೆ ಈ ಅವಘಡ ಸಂಭವಿಸಿದೆ. ಆದರ್ಶ್ ಅವರು ಮಧ್ವ ಸರೋವರದಲ್ಲಿ ಸ್ನಾನಕ್ಕಿಳಿದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಬಳಿಕ ಮುಳುಗು ತಜ್ಞ ಅರುಣ್ ಕುಮಾರ್ ಸರೋವರಕ್ಕಿಳಿದು ಮೃತದೇಹ ಮೇಲಕ್ಕೆತ್ತಿದರು. ಆದರ್ಶ್ ಮಠದ ವಸತಿ ಗೃಹದಲ್ಲಿ ನಿಂತಿದ್ದು, ಅಲ್ಲಿ ಶಿವಮೊಗ್ಗ ವಿದ್ಯಾನಗರದ ನಿವಾಸಿ ಎಂದು ನಮೂದಿಸಲಾಗಿದೆ. ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.