ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಪ್ರತಿವರ್ಷ ಉಜಿರೆಯಿಂದ ಧರ್ಮಸ್ಥಳದ ವರೆಗೆ ಸಹಸ್ರಾರು ಭಕ್ತರಿಂದ ಪಾದಯಾತ್ರೆ ನಡೆಯುತ್ತಿದ್ದು ಈ ಬಾರಿಯೂ 6ನೇ ವರ್ಷದ ಪಾದಯಾತ್ರೆ ವಿಜೃಂಬಣೆಯಿಂದ ಧರ್ಮಸ್ಥಳಕ್ಕೆ ಆಗಮಿಸಿತು.
ಉಜಿರೆ ದೇವಸ್ಥಾನದಲ್ಲಿ ಅಲ್ಲಿನ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಬಿ. ಯಶೋವರ್ಮ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಜತೆಗೂಡಿ ಪಾದಯಾತ್ರೆಗೆ ಚಾಲನೆ ನೀಡಿದರು.
ಚಾಲನೆಯ ಸಂದರ್ಭ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಎಪಿಎಂಸಿ ಅಧ್ಯಕ್ಷ ಕೇಶವ ಬೆಳಾಲು, ಜಿ.ಪಂ.ಸದಸ್ಯರಾದ ಧರಣೇಂದ್ರ ಕುಮಾರ್, ಸೌಮ್ಯಲತಾ, ಪ್ರಮುಖರಾದ ಪ್ರತಾಪಸಿಂಹ ನಾಯಕ್, ವಸಂತ ಸಾಲ್ಯಾನ್, ಪೀತಾಂಬರ ಹೇರಾಜೆ, ಇಚ್ಚಿಲ ಸುಂದರ ಗೌಡ, ರಾಜಶೇಖರ ಅಜ್ರಿ, ಜಯಂತ ಕೋಟ್ಯಾನ್, ಪಿ.ಕೆ.ರಾಜು ಪೂಜಾರಿ, ರಾಜೇಶ್ ಪೈ, ಮೋಹನ್ ಉಜಿರೆ, ಪ್ರಭಾಕರ ಗೌಡ, ಶರತ್ ಕೃಷ್ಣ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಕಳೆದ 5 ವರ್ಷಗಳಿಂದ ಪಾದಯಾತ್ರೆಯನ್ನು ಮಾಡಿ ಈ ಬಾರಿ 6ನೇ ಪಾದಯಾತ್ರೆಯನ್ನು ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳು, ಭಕ್ತರು ಭಕ್ತಿಯಿಂದ, ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪಾದಯಾತ್ರಾ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕರಿಸಲಾದ ವಾಹನ ರಥಗಳು ಗಮನ ಸೆಳೆದವು. ಪಾದಯಾತ್ರೆಯಲ್ಲಿ ಭಕ್ತರ ಜತೆಗೆ ಶಿವನ ಮೂರ್ತಿಯನ್ನೊಳಗೊಂಡ ಸ್ತಬ್ದಚಿತ್ರ, ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರಗಳು, ಡಾ.ಹೆಗ್ಗಡೆ ದಂಪತಿಯ ಭಾವಚಿತ್ರದ ವಾಹನಗಳು ಸಾಗಿದವು. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ಷೇತ್ರದ ವತಿಯಿಂದ ಅಂಬುಲೆನ್ಸ್, ಪಾದಯಾತ್ರೆಯಲ್ಲಿ ದಣಿವರಿಯುವ ಭಕ್ತರಿಗೆ ಅಲ್ಲಲ್ಲಿ ಸಂಘಸಂಸ್ಥೆಯ ವತಿಯಿಂದ ಪಾನೀಯದ ವ್ಯವಸ್ಥೆ, ವಾಹನ ಹಾಗೂ ಭಕ್ತರ ನಿಯಂತ್ರಣಕ್ಕೆ ಪೆÇಲೀಸ್ ಭದ್ರತೆ, ಅಚ್ಚುಕಟ್ಟಿನ ಸ್ವಯಂಸೇವಕ ತಂಡಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ದಾರಿಯುದ್ದಕ್ಕೂ ತಂಪು ಪಾನೀಯವನ್ನು ಸೇವಿಸಿ ಪಾದಯಾತ್ರಿಗಳು ತಮ್ಮ ದಣಿವನ್ನು ನಿವಾರಿಸಿಕೊಂಡು ಮಂಜುನಾಥನ ದರ್ಶನ ಪಡೆಯಲು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.
ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಹೊರಟ ಪಾದಯಾತ್ರೆಯಲ್ಲಿ ಸುಮಾರು 8 ಕಿ.ಮೀ.ದೂರದ ಧರ್ಮಸ್ಥಳಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ದೇವರ ನಾಮವನ್ನು ಜಪಿಸುತ್ತಾ, ಘೋಷಣೆಯನ್ನು ಕೂಗುತ್ತಾ ಶಿಸ್ತುಬದ್ದವಾಗಿ ಸಾಗಿದರು. ತಾಲೂಕಿನ ಹಲವಾರು ಸಂಘಸಂಸ್ಥೆಗಳು, ಅದರ ಪದಾಧಿಕಾರಿಗಳು, ಎಲ್ಲಾ ಪಕ್ಷದ ಮುಖಂಡರುಗಳು, ಧುರೀಣರು, ಧಾರ್ಮಿಕ ಮುಖಂಡರುಗಳು, ವಿವಿಧ ಸಂಘಟನೆಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.