ಮಂಗಳೂರು: ಕರಾವಳಿ ಪ್ರದೇಶ ಮಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹುನಿರೀಕ್ಷಿತ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಮಂಗಳೂರಿನ ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಅಲ್ಲ. ಇದು ಕರ್ನಾಟಕದ ಜನತೆಯ ಧ್ವನಿಯಾಗಿದೆ. ಜನರ ಮನ್ ಕೀ ಬಾತ್ ಆಗಿದೆ’ ಎಂದರು.
ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ರಾಹುಲ್ ಗಾಂಧಿ ‘ನನಗೆ ಕರ್ನಾಟಕಕ್ಕೆ ಬರಲು ಸಂತಸವಾಗುತ್ತದೆ ಮತ್ತು ಪ್ರಣಾಳಿಕೆ ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಈ ಪ್ರಣಾಳಿಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತ ನಾಲ್ವರು ತಯಾರಿಸಿದ್ದಲ್ಲ. ಎಲ್ಲಾ ಸಮುದಾಯಗಳನ್ನು ಕೇಳಿ ಇದನ್ನು ರಚಿಸಲಾಗಿದೆ. ನಿಮ್ಮ ಸರಕಾರ ಏನು ಮಾಡಬೇಕು ಎಂಬುದನ್ನು ಜನರಿಂದಲೇ ಕೇಳಿ ಇದನ್ನು ರಚಿಸಲಾಗುತ್ತದೆ’ ಎಂದರು.
ನಾವು ಬಸವಣ್ಣನವರ ಸಿದ್ಧಾಂತವನ್ನು ನಂಬುವವರು. ‘ನುಡಿದಂತೆ ನಡೆ’ ಎಂದು ಬಸವಣ್ಣ ಹೇಳಿದಂತೆ, ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ ಜಿಲ್ಲೆಗೆ ತೆರಳಿ, ಎಲ್ಲಾ ವರ್ಗದ ಜನರ ಆಶಯದಂತೆ ಈ ಬಾರಿ ಪ್ರಣಾಳಿಕೆ ತಯಾರಿಸಿದ್ದೇವೆ ಎಂದು ತಿಳಿಸಿದರು.
ಮೋದಿ ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಬಸವಣ್ಣನವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದಾರೆ. ಬಿಜೆಪಿ ಪ್ರಣಾಳಿಕೆ ಜನರ ಭಾವನೆಯನ್ನು ಪ್ರತಿನಿಧಿಸುವುದಿಲ್ಗ. ಬದಲಿಗೆ ಅದು ಆರ್.ಎಸ್.ಎಸ್ ಪರವಾಗಿರುವ ಪ್ರಣಾಳಿಕೆ ಎಂದು ಟೀಕಿಸಿದರು.
ಕರ್ನಾಟಕವನ್ನು ಇವತ್ತು ಸಿಲಿಕಾನ್ ವ್ಯಾಲಿಗೆ ಹೋಲಿಸುತ್ತಿದ್ದಾರೆ. ಕರ್ನಾಟಕಕ್ಕೆ ಎಲ್ಲರೂ ಬರುತ್ತಾರೆ. ಅವರನ್ನು ಕರ್ನಾಟಕದ ಜನರು ಸಹೋದರತೆಯಿಂದ ನೋಡುತ್ತಿದ್ದಾರೆ. ಕಾಂಗ್ರೆಸ್ ನಂಬಿರುವ ಪ್ರೀತಿ ಮತ್ತು ಸಹೋದರತೆಯನ್ನು ಎಲ್ಲೆಡೆ ಹರಡುತ್ತಿರುವ ಕಾಂಗ್ರೆಸಿನ ಕಾರ್ಯಕರ್ತರು ಮತ್ತು ಕನ್ನಡಿಗರಿಗೆ ನಾನು ಹೃದಯಂತರಾಳದಿಂದ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.