ಬೆಳ್ತಂಗಡಿ: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿನ ಕೃಷಿಕರಿಗೆ ಕುಮ್ಕಿ ಹಕ್ಕನ್ನು ನೀಡುವ ವ್ಯವಸ್ಥೆ ಮುಂದಿನ ಎರಡು ಮೂರು ತಿಂಗಳೊಳಗೆ ಜಾರಿಗೆ ಬರಲಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಬಳಂಜದಲ್ಲಿ ಆದಿತ್ಯವಾರ ನಡೆದ ಅಳದಂಗಡಿ ಮಹಾ ಶಕ್ತಿ ಕೇಂದ್ರದ್ರ ಬಳಂಜ ಗ್ರಾ.ಪಂ. ಮಟ್ಟದ ಕುಟುಂಬ ಮಿಲನ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಅಕ್ರಮ ಸಕ್ರಮದ ಹಕ್ಕು ಪತ್ರಗಳನ್ನು ಬೂತ್ ಮಟ್ಟದ ಕಾರ್ಯಕರ್ತರು ಹೇಳಿದವರಿಗೆ ಮಾತ್ರ ನೀಡುವಂತಹ ವ್ಯವಸ್ಥೆ ಮಾಡಲಾಗುವುದು. ಸರ್ವ ರೀತಿಯ ಅಭಿವೃದ್ಧಿ, ನಂಬಿಕೆ ಹಾಗು ಪ್ರಾಮಾಣಿಕತೆಯಿಂದಾಗಿ ಬಿಜೆಪಿ ಸರ್ವ ವ್ಯಾಪ್ತಿ ಸರ್ವ ಸ್ಪರ್ಶಿಯಾಗಿ ಬಿಜೆಪಿ ಬೆಳೆಯುತ್ತಿದೆ.ತಾಲೂಕಿನಲ್ಲಿ 263 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಳಂಜದಲ್ಲಿ ಕಾಂಗ್ರೇಸ್ ಮಾಡಿರುವ ಶೂನ್ಯ ಸಾಧನೆಯನ್ನು ಹಿಮ್ಮೆಟ್ಟಿಸಿ ಅಭಿವೃದ್ಧಿಯ ಪಥದತ್ತ ಬೆಳೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಹೇಳಿದ ರಸ್ತೆಗೆ ಅನುದಾನ ಇಡಲಾಗುತ್ತಿದೆ. ಬಳಂಜದ ಬಳಂಜ, ತೆಂಕಕಾರಂದೂರು ಹಾಗು ನಾಲ್ಕೂರು ಗ್ರಾಮಗಳಲ್ಲಿನ ರಸ್ತೆ, ನೀರಾವರಿ ಇತ್ಯಾದಿಗಳಿಗೆ ಇನ್ನಷ್ಟು ವೇಗ ಸಿಗಬೇಕಾದರೆ ಮುಂದಿನ ಪಂ.ನಲ್ಲಿ ಎಲ್ಲಾ ಸ್ಥಾನಗಳು ಬಿಜೆಪಿ ಗೆಲ್ಲಬೇಕು ಎಂದು ಆಶಿಸಿದರು.
ಹಿರಿಯ ಕಾರ್ಯಕರ್ತರಾದ ನಾಣ್ಯಪ್ಪ ಪೂಜಾರಿ ನಾಲ್ಕೂರು, ಪುರಂದರ ಶೆಟ್ಟಿ ಬಳಂಜ, ಶಾಂತಪ್ಪ ಮೂಲ್ಯ ತೆಂಕಕಾರಂದೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಹಿಸಿದ್ದರು. ವೇದಿಕೆಯಲ್ಲಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಉಪಾಧ್ಯಕ್ಷ ಸೀತಾರಾಮ ಬಿ.ಎಸ್., ತಾ.ಪಂ. ಸದಸ್ಯ ಸುಧೀರ ಸುವರ್ಣ, ವಿಶ್ವನಾಥ ಹೊಳ್ಳ, ಅರುಣ್ ಕ್ರಾಸ್ತ್, ಸದಾಶಿವ ಕರಂಬಾರು, ಚುನಾವಣಾ ಉಸ್ತುವಾರಿ ಮೋಹನದಾಸ ಅಳದಂಗಡಿ ಹಾಗು ಗ್ರಾಮ ಮಟ್ಟದ ಮುಖಂಡರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕಾಪಿನಡ್ಕದಿಂದ ಬಳಂಜದವರೆಗೆ ಬೈಕ್ ರ್ಯಾಲಿ ನಡೆಸಲಾಯಿತು. ಬಳಿಕ ಶಾಸಕರು ಸನಿಹದಲ್ಲಿನ ಹೈ ಮಾಸ್ಟ್ ದೀಪಕ್ಕೆ ಚಾಲನೆ ನೀಡಿದರು.
ಪ್ರಥಮ ಗೋಖಲೆ ವಂದೇ ಮಾತರಂ ಹಾಡಿದರು. ರಾಕೇಶ್ ಹೆಗ್ಡೆ ಸ್ವಾಗತಿಸಿದರು. ಬಾಲಕೃಷ್ಣ ಪೂಜಾರಿ ವಂದಿಸಿದರು. ಜಗದೀಶ ಬಳಂಜ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್ಗೆ
ಮುಂದಿನ ಹಣಕಾಸು ಯೋಜನೆಯಲ್ಲಿ ಕೇಂದ್ರ ಸರಕಾರ ಗ್ರಾ.ಪಂ.ಗೆ ನೇರವಾಗಿ ರೂ. ಒಂದು ಕೋಟಿಯ ಅನುದಾನವನ್ನು ಒದಗಿಸಲಿದೆ. ಈ ಹಣ ಸಮರ್ಪಕವಾಗಿ ಬಳಕೆಯಾಗಬೇಕಾದರೆ ಬಿಜೆಪಿ ಬೆಂಬಲಿತರು ಆಯ್ಕೆಯಾಗಬೇಕು. ಕಾಂಗ್ರೇಸ್ ಪಕ್ಷ ಆಯ್ಕೆಯಾದರೆ ಹಿಂದಿನ ಪ್ರಧಾನಿ ರಾಜೀವ ಗಾಂಧಿ ಹೇಳಿದಂತೆ ಅನುದಾನದ ಕಿಂಚಿತ್ ಅಂಶ ಮಾತ್ರ ತಲುಪಬಹುದು. ಹೀಗಾಗಿ ಕಾಂಗ್ರೇಸ್ ಮುಕ್ತ ಪಂಚಾಯತಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಶಾಸಕ ಪೂಂಜ ವಿನಂತಿಸಿದರು.