ಉಡುಪಿ: ಕಂಬಳದ ಗದ್ದೆಯಲ್ಲಿ ಹರಕೆಯ ಸಂದರ್ಭ ಕಂಬಳ ಕೋಣವೊಂದು ಯದ್ವಾತದ್ವಾ ಓಡಿ ಓರ್ವನನ್ನು ತಿವಿದ ಘಟನೆ ಉಡುಪಿ ಜಿಲ್ಲೆಯ ಚೇರ್ಕಾಡಿಯಲ್ಲಿ ನಡೆದಿದೆ.
ಚೇರ್ಕಾಡಿಯಲ್ಲಿ ಹರಕೆಗಾಗಿ ಕಂಬಳ ಕೋಣಗಳನ್ನು ಓಡಿಸಲಾಗುತ್ತಿತ್ತು. ಈ ವೇಳೆ ಕೋಣವೊಂದು ಕಂಬಳ ಗದ್ದೆ ಬಿಟ್ಡು ಯದ್ವಾತದ್ವಾ ಓಡಿದ್ದು, ಕಂಬಳ ವೀಕ್ಷಿಸುತ್ತಿದ್ದ ಜನರೂ ಚಲ್ಲಾಪಿಲ್ಲಿಯಾಗಿದ್ದಾರೆ. ಆದರೆ ಎದುರು ಸಿಕ್ಕಿದ ವ್ಯಕ್ತಿಯೋರ್ವನಿಗೆ ಕೋಣವು ಕೊಂಬಿನಲ್ಲಿ ತಿವಿದು ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ಅದೃಷ್ಡವಶಾತ್ ಕೋಣದ ತಿವಿತಕ್ಕೆ ಒಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಂಬಳದಲ್ಲಿ ಈಗ ಕೋಣಗಳಿಗೆ ಬೆತ್ತದೇಟು ಹಾಕಲು ನಿರ್ಬಂಧ ಇದೆ. ಹೀಗಾಗಿ ಕೋಣ ಓಡಿಸುವ ವ್ಯಕ್ತಿಯ ನಿಯಂತ್ರಣಕ್ಕೆ ಕೋಣ ಸಿಗುವುದಿಲ್ಲ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಕಂಬಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.