ಸುಳ್ಯ: ಎಡನೀರು ಮಠದ ನಿಯೋಜಿತ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮಿ (ಜಯರಾಮ ಮಂಜತ್ತಾಯ) ಗುರುವಾರ ಸುಳ್ಯ ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಅ.28ರಂದು ಅವರು ಮಠಾಧಿಪತಿಗಳಾಗಿ ಪೀಠಾರೋಹಣಗೈಯ್ಯಲಿದ್ದಾರೆ. ಅದಕ್ಕೆ ಮುಂಚಿತವಾಗಿ ವಿವಿಧ ದೇವಾಲಯಗಳ ದರ್ಶನ ಪಡೆಯುತ್ತಿದ್ದಾರೆ. ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ, ಕಾಂತಮಂಗಲದ ರಾಘವೇಂದ್ರ ಮಠ, ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹಾಗು ಮುಳ್ಯ ಮಠಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಪೀಠಾರೋಹಣ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನ ಭಕ್ತರನ್ನು ಆಮಂತ್ರಿಸಿದರು.
ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ವಸಂತ ಭಟ್ ತೊಡಿಕಾನ, ಪಿ.ಬಿ.ಪ್ರಭಾಕರ ರೈ, ಸಂತೋಷ್ ಕುತ್ತಮೊಟ್ಟೆ, ರಾಮ ಮಾರಾರ್ ತೊಡಿಕಾನ, ಜನಾರ್ದನ ಬಾಳೆಕಜೆ, ಕೃಪಾಶಂಕರ ತುದಿಯಡ್ಕ, ಕಿಶೋರ್ಕುಮಾರ್ ಉಳುವಾರು, ಕೇಶವ ಕೊಳಲುಮೂಲೆ, ಕೇಶವ ಪ್ರಸಾದ್ ತೊಡಿಕಾನ, ದೇವಸ್ಥಾನದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ, ಪ್ರಧಾನ ಅರ್ಚಕ ಕೇಶವಮೂರ್ತಿ ಮತ್ತಿತರರು ಸೇರಿ ಸ್ವಾಗತಿಸಿದರು.
ಚೆನ್ನಕೇಶವ ದೇವಸ್ಥಾನ ನೀಡಿದ ಸಂದರ್ಭ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಎನ್.ಎ.ರಾಮಚಂದ್ರ, ಲಿಂಗಪ್ಪ ಗೌಡ, ಕೃಪಾಶಂಕರ ತುದಿಯಡ್ಕ, ರಮೇಶ್ ಬೈಪಡಿತ್ತಾಯ ಮತ್ತಿತರು ಸ್ವಾಗತಿಸಿದರು. ಕಾಂತಮಂಗಲ ಶ್ರೀ ಗುರು ರಾಘವೇಂದ್ರ ಮಠ ಭೇಟಿ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎಂ.ಎನ್.ಶ್ರೀಕೃಷ್ಣ, ಪ್ರಕಾಶ್ ಮೂಡಿತ್ತಾಯ ಮತ್ತಿತರರು ಸ್ವಾಗತಿಸಿದರು.
ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಗುರುರಾಜ ಭಟ್, ಜೀರ್ಣೋದ್ಧರ ಸಮಿತಿಯ ಅಧ್ಯಕ್ಷ ಸುಧಾಕರ ಕಾಮತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಜಯರಾಮ ರೈ ಜಾಲ್ಸೂರು ಮತ್ತಿತತರರು ಸೇರಿ ಸ್ವಾಗತಿಸಿ ಗೌರವಿಸಿದರು.
ಕುಂಟಾರು ರವೀಶ ತಂತ್ರಿ, ಎಡನೀರು ಮಠದ ಪುರೋಹಿತರಾದ ಗೋಪಾಲಕೃಷ್ಣ ಅಡಿಗ, ಸೂರ್ಯನಾರಾಯಣ ಭಟ್, ಸತೀಶ್ ರಾವ್ ಮತ್ತಿತರರು ನಿಯೋಜಿತ ಶ್ರೀಗಳ ಜೊತೆಯಲ್ಲಿದ್ದರು.