ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆಪ್ತ ಹರಿಕೃಷ್ಣ ಬಂಟ್ವಾಳ ಅವರು ಬಿಜೆಪಿ ಸೇರುವುದಾಗಿ ಅಧಿಕೃತವಾಗಿ ಹೇಳಿದ್ದು, ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ.
ಶನಿವಾರ ನೆಹರೂ ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯ ಸಭೆಯ ವೇಳೆ ಬಿಜೆಪಿ ಸೇರುವುದಾಗಿ ಹರಿಕೃಷ್ಣ ಬಂಟ್ವಾಳ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾಣಿಯಲ್ಲಿ ಸರ್ಕಾರದ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಮಾಣಿಯಲ್ಲಿರುವ ಸರ್ಕಾರಿ ಜಾಗವು ರಮಾನಾಥ ರೈ ಅವರ ಪತ್ನಿಯ ಹೆಸರಿನಲ್ಲಿದೆ. ರಮಾನಾಥ ರೈ ನನ್ನ ಈ ಆರೋಪವನ್ನು ಇದುವರೆಗೆ ಕಡೆಗಣಿಸಲು ಹೋಗಿಲ್ಲ. ಯಾಕೆಂದರೆ ಅವರು ಅಪರಾಧ ಮಾಡಿದ್ದಾರೆ. ಎಲ್ಲಾ ಕಾನೂನು, ನಿಯಮಾವಳಿಯನ್ನು ಗಾಳಿಗೆ ತೂರಿ ಸುಮಾರು ಎರಡುವರೆ ಎಕ್ರೆ ಜಾಗವನ್ನು ಶೈಲಾ ರೈ ಹೆಸರಿಗೆ ಮಾಡಿದ್ದಾರೆ. ಶೈಲಾ ಯಾರು? ಇದರ ಬಗ್ಗೆ ಯಾವುದೇ ದಾಖಲೆ ಇದೆಯಾ? ಶೈಲಾ ಹೆಸರಿನಲ್ಲಿ ಆಧಾರ್ ಕಾರ್ಡ್ ಇದೆಯಾ ಅಥವಾ ರೈ ಜಾಗ ಕಬಳಿಸಲು ತನ್ನ ಪತ್ನಿಗೆ ಮತ್ತೊಂದು ಹೆಸರು ನೀಡಿದ್ದಾರೆಯಾ ಎಂದು ಹರಿಕೃಷ್ಣ ಪ್ರಶ್ನಿಸಿದರು.
ತನ್ನ ಮನೆಗೆ ಸಮೀಪದಲ್ಲೇ ಇರುವ ಸುಮಾರು ಹತ್ತು ಎಕ್ರೆ ಸರಕಾರಿ ಜಾಗವನ್ನು ಕಬಳಿಸಿಕೊಂಡಿರುವ ರಮಾನಾಥ ರೈ ಇದರಲ್ಲಿ ಕಳೆದ ಐದು ವರ್ಷಗಳಿಂದ ರಬ್ಬರ್ ತೋಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಆಕ್ರಮಿಸಿಕೊಂಡಿರುವ ಜಾಗವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸುಧಾಕರ್ ಬೋಳೂರು, ಸುರೇಶ್ಚಂದ್ರ ಕೋಟ್ಯಾನ್ ಮತ್ತು ನಾರಾಯಣ ಪೂಜಾರಿ ಬೊಲ್ಲುಕಲ್ಲು ಉಪಸ್ಥಿತರಿದ್ದರು.