ಸುಳ್ಯ: ರಾಜ್ಯ ಇಂಧನ ಸಚಿವರಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ ಆರೋಪದಲ್ಲಿ ವ್ಯಕ್ತಿಯೋರ್ವರು ಪೊಲೀಸ್ ಬಂಧನಕ್ಕೊಳಗಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.
ಬೆಳ್ಳಾರೆಯ ಸಾಯಿ ಗಿರಿಧರ ರೈ ಬಂಧಿತ ವ್ಯಕ್ತಿ. ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಉಂಟಾಗುತ್ತಿರುವ ನಿರಂತರ ವಿದ್ಯುತ್ ಕಡಿತದ ಹಿನ್ನಲೆಯಲ್ಲಿ ಸಚಿವರಿಗೆ ಮತ್ತು ಮೆಸ್ಕಾಂ ಇಂಜಿನಿಯರ್ಗಳಿಗೆ ದೂರವಾಣಿ ಕರೆ ಮಾಡಿ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂಬ ದೂರಿನ ಮೇರೆಗೆ ಗಿರಿಧರ ರೈ ಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ಬೆಳ್ಳಾರೆ ಮತ್ತು ಪರಿಸರದಲ್ಲಿಯೂ ಕಳೆದ ಕೆಲವು ದಿನಗಳಿಂದ ನಿರಂತರ ವಿದ್ಯುತ್ ಕಡಿತ ಉಂಟಾಗುತಿದೆ. ಇದರಿಂದ ರೋಸಿ ಹೋದ ಗಿರಿಧರ ರೈ ಅವರು ಭಾನುವಾರ ರಾತ್ರಿ ವಿದ್ಯುತ್ ಕಡಿತ ಉಂಟಾದಾಗ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಿದ್ಯುತ್ ಸಮಸ್ಯೆ ಕುರಿತು ತಿಳಿಸಲೆಂದು ದೂರವಾಣಿ ಕರೆ ಮಾಡಿದ್ದು ಈ ಸಂದರ್ಭದಲ್ಲಿ ಆಕ್ರೋಶಗೊಂಡು ಸಚಿವರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಸುಳ್ಯದ ಮೆಸ್ಕಾಂ ಇಂಜಿನಿಯರ್ ಗಳಿಗೂ ನಿಂದಿಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ವಿಷಯದ ಕುರಿತು ಇಂಧನ ಸಚಿವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಸುಳ್ಯದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಿದ ಸುಳ್ಯ ಪೊಲೀಸರು ಭಾನುವಾರ ರಾತ್ರಿ ಬೆಳ್ಳಾರೆಯ ಮನೆಯಿಂದ ಗಿರಿಧರ ರೈ ಅವರನ್ನು ಬಂಧಿಸಿದ್ದಾರೆ. ಸೋಮವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ಗಿರಿಧರ ರೈಗೆ ಷರತ್ತು ಬದ್ಧ ಜಾಮೀನು ನೀಡಿದೆ.