ಕಾಸರಗೋಡು: ಲಾರಿ ಕಂದಕಕ್ಕೆ ಉರುಳಿ ಚಾಲಕ ಮೃತಪಟ್ಟು, ಕ್ಲೀನರ್ ಗಂಭೀರವಾಗಿ ಗಾಯಗೊಂಡ ಘಟನೆ ಮಂಜೇಶ್ವರ ಸಮೀಪದ ಮಜಿಬೈಲ್ ನಲ್ಲಿ ಮಂಗಳವಾರ ನಡೆದಿದೆ.
ಮೃತಪಟ್ಟವರನ್ನು ಮಂಗಲ್ಪಾಡಿ ಪುಳಿಕುತ್ತಿಯ ಪ್ರಕಾಶ್ ( 38) ಎಂದು ಗುರುತಿಸಲಾಗಿದೆ. ಕ್ಲೀನರ್ ಮಂಜೇಶ್ವರದ ಶರೀಫ್ ( 32) ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಜಿಬೈಲು ಸಮೀಪದ ಪಜಿಂಗಾರು ಎಂಬಲ್ಲಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಲಾರಿಯು ಮೀಯಪದವಿನಿಂದ ಕೆಂಪು ಕಲ್ಲು ಗಳನ್ನು ಹೇರಿಕೊಂಡು ಹೊಸಂಗಡಿಗೆ ಹೊಸಂಗಡಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು 60 ಅಡಿ ಆಳದ ಕಂದಕಕ್ಕೆ ಮಗುಚಿ ಬಿದ್ದಿದೆ. ಲಾರಿಯಡಿಯಲ್ಲಿ ಸಿಲುಕಿದ್ದ ಚಾಲಕ ಪ್ರಕಾಶ್ ಹಾಗೂ ಕ್ಲೀನರ್ ಶರೀಫ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನು ಹೊರತೆಗೆದು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಕಾಶ್ ದಾರಿಮಧ್ಯೆ ಮೃತಪಟ್ಟರು. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.