ಸುಳ್ಯ: ಅಂತಾರಾಜ್ಯ ರಸ್ತೆಯ ಬಾರ್ಪಣೆಯಲ್ಲಿ ಹೊಸ ಸೇತುವೆ ನಿರ್ಮಾಣ ಪೂರ್ತಿಯಾಗಿದ್ದು ಇಂದಿನಿಂದ ಸಂಚಾರಕ್ಕೆ ಮುಕ್ತವಾಗಲಿದೆ.
ಆಲೆಟ್ಟಿ-ಕೋಲ್ಚಾರು-ಕಣಕ್ಕೂರು-ಬಂದಡ್ಕ ಅಂತಾರಾಜ್ಯ ರಸ್ತೆಯಲ್ಲಿ 2.60 ಕಿ.ಮಿ.ರಲ್ಲಿ ಬಾರ್ಪಣೆ ಎಂಬಲ್ಲಿ ಇದ್ದ ಕಿರಿದಾದ ಹಳೆಯ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕಾರ್ಯ ಕಳೆದ ಡಿಸೆಂಬರ್ ನಲ್ಲಿ ಆರಂಭಗೊಂಡಿತ್ತು. ಮಾರ್ಚ್ 31ಕ್ಕೆ ಕಾಮಗಾರಿ ಪೂರ್ತಿಯಾಗಲಿದೆ ಎಂದು ಹೇಳಲಾಗಿದ್ದರೂ ಲಾಕ್ಡೌನ್ ಹಿನ್ನಲೆಯಲ್ಲಿ ಎರಡು ತಿಂಗಳು ತಡವಾಗಿದೆ. ಸೇತುವೆ ಕಾಮಗಾರಿ ಪೂರ್ತಿಗೊಂಡಿದ್ದು ಎರಡೂ ಬದಿಯಲ್ಲಿ ಕೂಡು ರಸ್ತೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಕೂಡು ರಸ್ತೆಯಲ್ಲಿ ಮಣ್ಣು ಹಾಕಿ ಅದರ ಮೇಲೆ ಜಲ್ಲಿ ಹಾಸಿ ಗಟ್ಟಿಗೊಳಿಸುವ ಕೆಲಸ ಅಂತಿಮ ಹಂತದಲ್ಲಿದ್ದು ಸೇತುವೆಯನ್ನು ಇಂದಿನಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ತಿಳಿಸಿದ್ದಾರೆ.
ಬಾರ್ಪಣೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಲ್ಲಿ 91 ಲಕ್ಷ ರೂ ಅನುದಾನ ಬಿಡುಗಡೆಗೊಂಡಿತ್ತು.
19 ಮೀಟರ್ ಉದ್ದದ ಸೇತುವೆ:
17.60 ಮೀಟರ್ ಉದ್ದದ 10 ಮೀಟರ್ ಕ್ಯಾರಿಯೇಜ್ ವೇ ಅಗಲದ ಸೇತುವೆ ನಿರ್ಮಾಣಗೊಂಡಿದೆ. 8.42 ಮೀಟರ್ ಅಗಲದ ಎರಡು ಅಂಕಣಗಳು, ಎರಡು ಅಬಾಟ್ಮೆಂಟ್, ಎರಡು ವೃತ್ತಾಕಾರದ ಪಿಲ್ಲರ್ಗಳು ಇರುವ ರ್ಯಾಪ್ ಫೌಂಡನ್ ಒಳಗೊಂಡಂತೆ ಆರ್ಸಿಸಿ ಸೇತುವೆ ನಿರ್ಮಾಣವಾಗಿದೆ. ಸೇತುವೆ ಕಾಮಗಾರಿ ನಡೆಯುತ್ತಿರುವ ನಿಟ್ಟಿನಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು. ಸುಳ್ಯ-ಬಂದಡ್ಕ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಕೊಲ್ಲರಮೂಲೆ-ಕರ್ಲಪ್ಪಾಡಿ ದ್ವಾರ-ಕಾಂತಮಂಗಲ ರಸ್ತೆಯಲ್ಲಿ ಸಂಚರಿಸಲಾಗುತ್ತಿತ್ತು
`ಕೋಲ್ಚಾರ್-ಬಂದಡ್ಕ ರಸ್ತೆಯಲ್ಲಿ ಬಾರ್ಪಣೆಯಲ್ಲಿ ಸೇತುವೆ ನಿರ್ಮಾಣ ಪೂರ್ತಿಗೊಂಡಿದೆ. ಇಂದಿನಿಂದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಬಳಿಕ ಸೇತುವೆಯ ರಕ್ಷಣಾ ಬೇಲಿ ನಿರ್ಮಾಣ ಕಾರ್ಯ ಮತ್ತಿತರ ಕಾಮಗಾರಿ ಬಳಿಕ ಮುಂದುವರಿಯಲಿದೆ”
-ಸಣ್ಣೇ ಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್,
ಲೋಕೋಪಯೋಗಿ ಇಲಾಖೆ, ಸುಳ್ಯ