ಮೂಡುಬಿದಿರೆ: `ಭಾಷೆ ನಾಶವಾಗುತ್ತದೆ ಎಂಬುದು ಭ್ರಮೆ. ಮನೆಯಲ್ಲಿ, ಒಡನಾಡಿಗಳಲ್ಲಿ ತುಳುವಿನಲ್ಲೇ ಮಾತನಾಡುವ ಮನೋಭಾವ ಬೆಳೆಸಬೇಕು. ತುಳುವಿನಲ್ಲಿ ಮಾತನಾಡಿದಾಗ ಮಾತ್ರ ನಮ್ಮಲ್ಲಿ ಆಪ್ತತೆ ಮೂಡುತ್ತದೆ. ಮನೆಯ ಹಿರಿಯರ ಅಂತರಂಗಕ್ಕೆ ಹತ್ತಿರವಾಗುತ್ತೇವೆ. ಬಳಸಿದರೆ ಭಾಷೆ ಉಳಿಯುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ನುಡಿದರು.
ಮೂಡುಬಿದಿರೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆ ಮತ್ತು ಪ್ರದರ್ಶನ ಮೇಳ ಆಳ್ವಾಸ್ ತುಳು ರಂಗ್ 2018 ಅನ್ನು ಸೇರಿಗೆ ಭತ್ತ ತುಂಬಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಪ್ರೊ.ಕುರಿಯನ್ ಮಾತನಾಡಿ ತುಳು ಸಂಸ್ಕೃತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಗುಣವಿದೆ. ತುಳುವರ ಪ್ರಕೃತಿ ಆರಾಧನೆಯ ಸಂಸ್ಕೃತಿ ಇಂದು ಇನ್ನಷ್ಟು ಪ್ರಸ್ತುತ ಎಂದರು.
ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ.ಯೋಗೀಶ ಕೈರೋಡಿ ಉಪಸ್ಥಿತರಿದ್ದರು. ಮೈತ್ರಿ ಸ್ವಾಗತಿಸಿದರು. ಸಯ್ಯದ್ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತುಳು ಸಂಸ್ಕೃತಿಯನ್ನು ಅನಾವರಣ ಮಾಡುವ ವಿವಿಧ ಸ್ಪರ್ಧೆ-ಪ್ರದರ್ಶನಗಳು ದಿನ ಪೂರ್ತಿ ನಡೆಯಿತು.