ಸುಳ್ಯ: ಕೃಷಿ ಬೆಳೆಗಳಿಗೆ ಆನೆ ಉಪಟಳ ತೀವ್ರವಾಗಿದೆ. ಅದರ ನಿಯಂತ್ರಣಕ್ಕೆ ಆನೆಗಳ ದಾಳಿ ಅಧಿಕ ಇರುವ ಅರಣ್ಯದಂಚಿನಲ್ಲಿ ಜೇನು ಗೂಡು ಇರಿಸುವ ತಂತ್ರದ ಪ್ರಯೋಗವನ್ನು ಸುಳ್ಯ ಭಾಗದಲ್ಲಿ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಸಚಿವ ಆರ್.ಶಂಕರ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಸುಳ್ಯ ನಾಗಪಟ್ಟಣದ ರಬ್ಬರ್ ಕಾರ್ಖಾನೆಗೆ ಭೇಟಿ ನೀಡಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಆನೆಗಳು ಊರಿಗೆ ಬಂದು ದಾಳಿ ನಡೆಸುವುದನ್ನು ತಡೆಯಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳ ಅಳವಡಿಕೆಗೂ ಚಿಂತನೆ ನಡೆಸಲಾಗುವುದು ಎಂದರು.
ರಬ್ಬರ್ ಧಾರಣೆ ಇಳಿಮುಖದಿಂದ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತಿರುವ ಮಾಹಿತಿ ಪಡೆದಿದ್ದೇನೆ. ರಾಜ್ಯ ಸರ್ಕಾರ ಬೆಳೆಗಾರರ ಪರ ಸ್ಪಂದಿಸುವ ಮತ್ತು ಸಭೆ ನಡೆಸಿ ಬೆಂಬಲ ಬೆಲೆ ಮತ್ತಿತರ ಸಹಾಯ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸುಳ್ಯದಲ್ಲಿ 110 ಕೆ.ವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅರಣ್ಯ ಭೂಮಿ ಒದಗಿಸಲು ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡಬೇಕು. ಆ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ತಾಲೂಕಿನ ಕಾಡಂಚಿನ ಮಡಪ್ಪಾಡಿ ಭಾಗದಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಂದವರು ಯಾರು ಎಂದು ಖಚಿತವಾಗಿ ದೃಢಪಟ್ಟಿಲ್ಲ, ಅರಣ್ಯ ಭಾಗದಲ್ಲಿ ಈ ಬಗ್ಗೆ ನಿಗಾ ಇರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.