ಕೊಪ್ಪಳ: ಕುಮಾರಸ್ವಾಮಿಗೆ ಹಾಗೂ ಆರ್ಎಸ್ಎಸ್ ಗೆ ನನ್ನ ಕಂಡರೆ ಭಯವಿದೆ. ಅದಕ್ಕೆ ಅವರು ನನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ ತಾಲ್ಲೂಕಿನ ಬಸಾಪೂರ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಬ್ಬರಿಗೂ ನನ್ನ ಕಂಡರೆ ಭಯ ಅದಕ್ಕೆ ನನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂದರು.
ನಾವು ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿಲ್ಲ. ಕಳೆದುಕೊಳ್ಳುವಂತೆ ಬಿಜೆಪಿಗರು ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಮಹಾರಾಷ್ಟ್ರ ಸರ್ಕಾರ ಬೀಳಿಸುತ್ತಿದ್ದಾರೆ. ಬಿಜೆಪಿಗರು ಆಪರೇಷನ್ ಕಮಲ ಮಾಡ್ತಿರೋದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಸಿಎಂ ಆಗುತ್ತಾರೆಂಬ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಜನ ಆಶೀರ್ವಾದ ಮಾಡಬೇಕು. ನಾವೇ ಹೋಗಿ ಕುಳಿತುಕೊಳ್ಳಲು ಆಗುತ್ತಾ? ಎಂದು ಪ್ರಶ್ನೆ ಮಾಡಿದರು.
ಮಧ್ಯ ಪ್ರದೇಶದ ಸರ್ಕಾರ ಕಿತ್ತು ಹಾಕಿದ್ದು ಯಾರು? ಕರ್ನಾಟಕದ ಸಮ್ಮಿಶ್ರ ಸರ್ಕಾರ ಕಿತ್ತಾಕಿದ್ದು ಯಾರು? ಪಾಪದ ಹಣ ಅವರ ಬಳಿ ಇದೆ, ಲೂಟಿ ಹೊಡೆದ ಹಣ ಇದೆ. ಒಬ್ಬೊಬ್ಬ ಶಾಕರಿಗೆ 25- 30 ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಶಾಸಕರೆಲ್ಲ ಸುಮ್ಮನೇ ಬರ್ತಾರಾ? ಅಧಿಕಾರ ಇದೆಯಲ್ಲ ಎಲ್ಲ ಕಡೆ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರ ಇದೆ, ದುಡ್ಡಿದೆ ಅದಕ್ಕಾಗಿ ಎಲ್ಲ ಸರ್ಕಾರ ಬೀಳಿಸುತ್ತಿದ್ದಾರೆ ಎಂದು ಆರೋಪಿಸಿದರು.