ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರೇ ಬಿಜೆಪಿಯನ್ನು ಸೋಲಿಸಬೇಕಾ? ಹಾಗದ್ರೆ ನಮಗೆ ಬೆಂಬಲ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿಯೇ ಜೆಡಿಎಸ್ಗೆ ಆಫರ್ ಇಟ್ಟಿದ್ದಾರೆ.
ರಾಜ್ಯಸಭೆ ಚುನಾವಣೆಗೆ ನಾಳೆ ಮತನಾದ ನಡೆಯಲಿದ್ದು, 4 ನೇ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷದವರ ಬಳಿಯೂ ಬಹುಮತ ಇಲ್ಲ.
ಕೊನೇ ಹಂತದ ಕಸರತ್ತು ನಡೆಯುತ್ತಿದ್ದು, ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ಬಗ್ಗೆ ಗುರುವಾರ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ನಲ್ಲಿ 80 ಶಾಸಕರು ಇದ್ದಾಗಲೇ ಎಚ್ಡಿಕೆ ಅವರನ್ನು ನಾವು ಸಿಎಂ ಮಾಡಿದ್ದೇವೆ. ಈ ಬಾರಿ ರಾಜ್ಯಸಭೆ ಚುನಾವಣೆಯ 4ನೇ ಅಭ್ಯರ್ಥಿಯನ್ನಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇವೆ. ಕುಮಾರಸ್ವಾಮಿ ಅವರೇ ನಮಗೆ ಬೆಂಬಲ ನೀಡಿ. ಆ ಮೂಲಕ ಬಿಜೆಪಿ ಸೋಲಿಸಿ ಎಂದು ಕರೆ ನೀಡಿದ್ದಾರೆ.
ದೇವೇಗೌಡರನ್ನು ನಾವು ಪ್ರಧಾನಿ ಮಾಡಲಿಲ್ಲವೇ? ಅವರನ್ನು ರಾಜ್ಯಸಭೆಗೆ ಕಳಿಸಲಿಲ್ಲವೇ? ನಮ್ಮ ಅಭ್ಯರ್ಥಿ ಮೈನಾರಿಟಿಗೆ ಸೇರಿದವರು. ಜಾತ್ಯತೀತ ನಂಬಿಕೆಯಲ್ಲಿ ಅಭ್ಯರ್ಥಿ ಹಾಕಿದ್ದೇವೆ. ಜೆಡಿಎಸ್ನವರು ಬೆಂಬಲಿಸಲಿ. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಒಟ್ಟು 9 ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.