ಬೆಳ್ತಂಗಡಿ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರ್.ಎಸ್.ಎಸ್ ನಲ್ಲಿ ದಲಿತರಿಗೆ ಹುದ್ದೆಕೊಡಿ ಎಂದು ಹೇಳುತ್ತಿದ್ದಾರೆ ಅವರಿಗರ ದಲಿತರ ಬಗ್ಗೆ ಕಾಳಜಿಯಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಪ್ರಕಟಿಸಲಿ ಎಂದು ಶಾಸಕ ಮಾಜಿ ಸಚಿವ ಎನ್. ಮಹೇಶ್ ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿಯವರ 8 ನೇ ವರ್ಷದ ಆಡಳಿತ ಸಂಭ್ರಮಾಚರಣೆ ಪ್ರಯುಕ್ತ ಭಾರತೀಯ ಜನತಾ ಅಪರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಶನಿವಾರ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡ ಎಸ್.ಸಿ. ಮೋರ್ಚಾ ಬಂಧುಗಳ ಸಮಾವೇಶ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಮುಖಂಡರುಗಳನ್ನು ವ್ಯವಸ್ಥಿತವಾಗಿ ತುಳಿಯುತ್ತಾ ಬಂದಿರುವ ಸಿದ್ದರಾಮಯ್ಯ ಅವರು ಈಗಿನ ರಾಷ್ಟ್ರಪತಿಯ ಬಗ್ಗೆ ಎನ್.ಡಿ.ಎ. ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಮಾತನಾಡುತ್ತಿರುವ ರೀತಿ ನೋಡಿದರೆ ಅವರ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯ ಎಂದರು.
ಕಾಂಗ್ರೆಸ್ ಪ್ರತಿಯೊಂದು ಸಂದರ್ಭದಲ್ಲಿಯೂ ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಾ ಬಂದಿದೆ ಎಂದು ಆರೋಪಿಸಿದ ಅವರು ಕೇಂದ್ರದ ನರೇಂದ್ರ ಮೋದಿಯವರ ಸರಕಾರ ಇದೀಗ ಶೋಷಿತ ಸಮಯದಾಯಕ್ಕೆ ಸೇರಿದ ಮಹಿಳೆಗೆ ರಾಷ್ಟ್ರ ಪತಿಯಾಗುವ ಅವಕಾಶ ಒದಗಿಸಿದೆ ಇದು ಶೋಷಿತರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವಾಗಿದೆ ಎಂದರು.
ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜಾ ರಾಜ್ಯಕ್ಕೆ ಮಾದರಿಯಾಗುವಲ್ಲಿ ಕೆಲಸ ಮಾಡಿದ್ದಾರೆ.ಮುಖ್ಯ ಮಂತ್ರಿಗಳಲ್ಲಿ,ಎಲ್ಲಾ ಸಚಿವರಲ್ಲಿ ಒಡನಾಟ ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ದಾಖಲೆಯ ಅನುದಾನ ತಂದಿದ್ದಾರೆ.ಇನ್ನಷ್ಟು ತಾಲೂಕಿನ ಅಭಿವೃದ್ಧಿಗೆ ಮತ್ತೆ ಅವರನ್ನು ಶಾಸಕರನ್ನಾಗಿ ಮಾಡಬೇಕು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಅಂಬೇಡ್ಕರ್ ಅವರಿಗೆ ಗೌರವ ನೀಡಿದವರು ನರೇಂದ್ರಮೋದಿಯವರಾಗಿದ್ದಾರೆ. ಗ್ರಾಮ ಗ್ರಾಮಗಳಲ್ಲಿ ರಸ್ತೆ, ಸೇತುವೆ, ವಿದ್ಯುತ್, ಶೈಕ್ಷಣಿಕ ವ್ಯವಸ್ಥೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಗೊಳಿಸಲಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾಲೂಕಿನ ಕ್ರೀಡಾಂಗಣವನ್ನು ಸ್ಥಳಾಂತರಮಾಡಿ ತಾಲೂಕು ಕ್ರೀಡಾಂಗಣದಲ್ಲಿ ಆರು ಕೋಟಿ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣ,ರಾಜ್ಯಕ್ಕೆ ಮಾದರಿಯಾಗಿರುವ ರೀತಿಯಲ್ಲಿ ಒಂದು ಗ್ರಂಥಾಲಯ ,ಕಾಣದ ಕಟದ ಮೂಲ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೀತಿಯ ಸಹಕಾರ , ತಾಲೂಕಿನ ವಿವಿದೆಡೆಗಳಲ್ಲಿ ಅಂಬೇಡ್ಕರ್ ಭವನದ ಬೇಡಿಕೆಗಳಿದ್ದು ಅದರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್
ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ವಿನಯನೇತ್ರ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ,ಜಿಲ್ಲಾ ಕಾರ್ಯದರ್ಶಿ ಮಂಗಳಗೌರಿ, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರ.ಕಾರ್ಯದರ್ಶಿ ನವೀನ್ ಎಲ್.ಸಿ., ಬಿಜೆಪಿ ಬೆಳ್ತಂಗಡಿ ಮಂಡಲ ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ ನಾವೂರು, ನಪಂ ಅಧ್ಯಕ್ಷೆ ರಜನಿ ಕುಡ್ವ , ಎಸ್ ಸಿ ಮೋರ್ಚಾ ಪದಾಧಿಕಾರಿಗಳಾದ ರಾಘವ ಕಲ್ಮಂಜ, ಸದಾಶಿವ ಕರಂಬಾರು ಉಪಸ್ಥಿತರಿದ್ದರು.
400 ಮಂದಿ ಸಾಧಕರಿಗೆ ಸಮ್ಮಾನ ಹಾಗೂ 150 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಎಸ್.ಸಿ.ಮೋರ್ಚಾ ಅಧ್ಯಕ್ಷ ಗೋಪಾಲಕೃಷ್ಣ ಮಡಂತ್ಯಾರು ಸ್ವಾಗತಿಸಿದರು. ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ರವಿ ನಿರೂಪಿಸಿದರು.