ದೋಟಿಹಾಳ : ಬೇವಿನ ಮರದಿಂದ ಹಾಲು ಸೋರುತ್ತಿದ್ದು, ಜನಮರುಳೋ ಜಾತ್ರೆ ಮರುಳೋ ಎಂಬಂತೆ ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ನಡೆದಿದೆ. ಬೇವಿನ ಮರದಿಂದ ಬಿಳಿ ಹಾಲು ಜಿನುಗುತ್ತಿರುವುದನ್ನು ಜನತೆ ಪವಾಡವೆಂದೇ ನಂಬುತ್ತಿದ್ದಾರೆ.
ಬಿಜಕಲ್ ಗ್ರಾಮದ ಗೋಪಾಲರಾವ್ ದೇಸಾಯಿ ಅವರ ಹೊಲದಲ್ಲಿ ಇರುವ ಗದ್ದಿ ದ್ಯಾಮಮ್ಮ ಎಂಬುವ ದೊಡ್ಡ ಬೇವಿನ ಮರದಿಂದ ಕಳೆದ ಒಂದು ವಾರದಿಂದ ಬಿಳಿ ಹಾಲು ಹೊರಬರುತ್ತಿದೆ. ಇದನ್ನು ನೋಡಲು ಸುತ್ತಮುತ್ತ ಜನ ಹಾಗೂ ಬಿಜಕಲ್ ಗ್ರಾಮಸ್ಥರು ತಂಡೋಪತಂಡವಾಗಿ 1ಕಿ.ಮೀ. ದೂರದಿಂದ ನಡೆದು ಕೊಂಡು ಬರುತ್ತಿದ್ದಾರೆ. ಇದು ದೈವ ಲೀಲೆ ಎಂದೇ ನಂಬಿ ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಬೇವಿನ ಗಿಡದ ಬುಡಕ್ಕೆ ಕಲ್ಲುಗಳನ್ನಿಟ್ಟಿ ಗದ್ದಿ ದ್ಯಾಮಮ್ಮ ದೇವಿ ರೂಪದಲ್ಲಿ ಪೂಜಿಸುತ್ತಿದ್ದಾರೆ. ಸುದ್ದಿ ತಿಳಿದು ಸುತ್ತಲಿನ ಗ್ರಾಮಗಳ ಜನ ತಂಡೋಪ ತಂಡವಾಗಿ ಬಂದು ಮರವನ್ನು ವೀಕ್ಷಿಸುತ್ತಿದ್ದಾರೆ. ಹಾಲು ಜಿನುಗುತ್ತಿರುವುದು ಪವಾಡವೆಂದೇ ನಂಬಿ, ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷ ಪೂಜೆ ಮಾಡಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಮತ್ತೊಂದೆಡೆ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳಿದ್ದಾನೆ. ನಮ್ಮ ಗ್ರಾಮದ ಗದ್ದಿ ದ್ಯಾಮಮ್ಮ ಬೇವಿನ ಮರದಲ್ಲಿ ಹಾಲು ಜಿನುಗುತ್ತಿರುವುದರಿಂದ ಏನು ಲಾಭವಾಗುತ್ತೆ ಅಂತ ಜ್ಯೋತಿಷಿಗಳನ್ನು ಕೇಳಿದ್ದಾನೆ. ಇದು ದೇವಿ ಪವಾಡವಾಗಿದೆ ಇದಕ್ಕೆ ವಿಶೇಷ ಪೂಜೆ ಮಾಡಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಹೀಗಾಗಿ ಗ್ರಾಮಸ್ಥರು ಬೇವಿನ ಮರಕ್ಕೆ ವಿಶೇಷ ಪೂಜೆ ಮಾಡುತ್ತಿದ್ದಾರೆ. ಇದನ್ನು ನೋಡಲು ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದರು.
ವೈಜ್ಞಾನಿಕವಾಗಿ ನೋಡಿದಾಗ ಬೇವಿನ ಮರದಲ್ಲಿ ಬಿಳಿ ದ್ರವ ಸುರಿಯೋದು ಸಹಜ ಪ್ರಕ್ರಿಯೆ ಎಂದಿದ್ದರೂ, ಜನ ಮಾತ್ರ ವಿಸ್ಮಯ ಎನ್ನುವ ರೀತಿಯಲ್ಲಿ ಅದನ್ನು ವೀಕ್ಷಿಸುತ್ತ್ತಿದ್ದಾರೆ. ನಾಳೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.