ಕಲಬುರಗಿ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ ನ್ಯಾಯ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಮೀಸಲಾತಿ ವಿಚಾರದಲ್ಲಿ ನಮ್ಮದು ಕ್ರಾಂತಿಕಾರಿ ನಿರ್ಣಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿಯಲ್ಲಿ ಒಬಿಸಿ ವಿರಾಟ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದರು.
ಕಾಗಿನೆಲೆ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣನ ಅಭಿವೃದ್ಧಿ, ಮಿಲಿಟರಿ ಶಾಲೆ ನಾವು ಕೊಟ್ಟಿದ್ದೇವೆ. ಹಿಂದುಳಿದ ವರ್ಗ, ಕುರುಬ ಸಮಾಜವನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷವು ಮೋಸ ಮಾಡಿತ್ತು. ಎಸ್ಸಿ, ಎಸ್ಟಿ ಯವರನ್ನು ಮುಖ್ಯವಾಹಿನಿಗೆ ತರಲು ಸಾಮಾಜಿಕ ನ್ಯಾಯದ ನಿರ್ಧಾರ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಿಂದುಳಿದ ವರ್ಗದ ಕುರುಬ ಜನಾಂಗಕ್ಕೆ ಅಮೃತ ಯೋಜನೆ ಜಾರಿಗೊಳಿಸಿದ್ದೇವೆ. 354 ಕೋಟಿಯ ಅನುದಾನ ನೀಡಿದ್ದೇವೆ. ಸಿದ್ರಾಮಣ್ಣ, ಕಾಂಗ್ರೆಸ್ನವರು ಯಾಕೆ ಇದನ್ನು ಮಾಡಿರಲಿಲ್ಲ ಎಂದು ಪ್ರಶ್ನಿಸಿ, ಒಬಿಸಿ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ ಎಂದು ಕೇಳಿದರು.
ನೈಜ, ಸಾಮಾಜಿಕ ನ್ಯಾಯ, ಅವಕಾಶ, ಸಮಾನತೆಯನ್ನು ನಾವು ನೀಡುತ್ತಿದ್ದೇವೆ. ಹಿಂದುಳಿದ ವರ್ಗದ ಅಭಿವೃದ್ಧಿಗೆ ಮೋದಿಜಿ ಅವರು ಪ್ರೇರಣೆ ನೀಡಿದ್ದಾರೆ. ಅವರು ಹಿಂದುಳಿದ ವರ್ಗ ಸೇರಿದಂತೆ ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಗಾಗಿ ಶ್ರಮಿಸುತ್ತಿದ್ದಾರೆ. ಆ ದಾರಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎಂದರು.
ನಾನು ಮುಖ್ಯಮಂತ್ರಿ ಆದ ಬಳಿಕ ಕೋಲಿ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದೇನೆ. ಅವರಿಗೆ ನ್ಯಾಯ ನೀಡಲು ನಿರ್ಧಾರ ತೆಗೆದುಕೊಂಡಿದ್ದೇನೆ. ಸರಕಾರಿ ಆದೇಶವನ್ನು ತಂದಿದ್ದೇನೆ. ಈ ಸಮ್ಮೇಳನಕ್ಕೆ ಖಾಲಿ ಕೈಯಲ್ಲಿ ಬಂದಿಲ್ಲ. ಆದೇಶವನ್ನು ತಂದಿದ್ದೇನೆ. ಮಾತಿನಲ್ಲಿ ಸಾಮಾಜಿಕ ನ್ಯಾಯ ಕೊಡುವುದಲ್ಲ ಎಂದು ತಿಳಿಸಿದರು.
ನಾವು ಜನರಿಗಾಗಿ ರಾಜಕಾರಣ ಮಾಡುತ್ತೇವೆ. ಒಬಿಸಿ ವರ್ಗಕ್ಕೆ ನ್ಯಾಯ ಕೊಡುತ್ತೇವೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ ನಮ್ಮದು. 1500 ಕೋಟಿ ಅನುದಾನವನ್ನು 3 ಸಾವಿರ ಕೋಟಿಗೆ ಈಗಾಗಲೇ ಹೆಚ್ಚಿಸಿದ್ದು, ಮುಂದಿನ ವರ್ಷ ಅದನ್ನು 5 ಸಾವಿರ ಕೋಟಿಗೆ ಏರಿಸುವುದಾಗಿ ತಿಳಿಸಿ, ಹಸಿವು, ಬಡತನ ಮುಕ್ತ ಕಲ್ಯಾಣ ಕರ್ನಾಟಕವನ್ನು ನೋಡಲು ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಇನ್ನು ಈ ಸಮಾವೇಶದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಕೇಂದ್ರ- ರಾಜ್ಯದ ಸಚಿವರು, ಮಾಜಿ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.