ಕಲಬುರಗಿ : ಸಿದ್ದರಾಮಯ್ಯ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಇರೋದು ಕನ್ಫರ್ಮ್ ಆಗಿದೆ. ಹೀಗಾಗಿ, ಭವಿಷ್ಯ ನುಡಿಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಅವಧಿಪೂರ್ಣ ಮಾಡೋದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಾವು ವಿರೋಧ ಪಕ್ಷದಲ್ಲಿ ಇರುವುದು ಖಚಿತವಾಗಿದೆ. ಹೀಗಾಗಿ, ಭವಿಷ್ಯ ನುಡಿಯುತ್ತಾರೆ ಎಂದು ತೀರುಗೇಟು ನೀಡಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ 77ವರ್ಷ ಆಗಿರೋದ್ರಿಂದ ಬಿಟ್ಟು ಕೊಡ್ತೇನೆ ಅಂತಾ ಹೇಳಿದ್ದಾರೆ. ಅವರು ಸ್ವ-ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಯಡಿಯೂರಪ್ಪ ಖುಷಿಯಿಂದ ಕಣ್ಣೀರು ಬಂದಿದೆ ಅಂತಾ ಸ್ವತಃ ತಾವೇ ಹೇಳಿದ್ದಾರೆ.ಪಕ್ಷದ ತತ್ವ, ಸಿದ್ಧಾಂತಗಳ ಪ್ರಕಾರ 75 ವರ್ಷ ಮೀರಿದವರಿಗೆ ಅಧಿಕಾರ ಕೊಟ್ಟಿರಲಿಲ್ಲ. ಆದ್ರೆ, ಯಡಿಯೂರಪ್ಪನವರಿಗೆ ಎರಡು ವರ್ಷ ಅಧಿಕಾರ ಮಾಡೋಕೆ ಅವಕಾಶ ಕೊಟ್ಟಿದ್ದಾರೆ ಎಂದು ಕಟೀಲ್ ಹೇಳಿದರು. ಏಳು ವರ್ಷದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡಿವೆ. ಭ್ರಷ್ಟಾಚಾರ ರಹಿತ ಆಡಳಿತವನ್ನ ನರೇಂದ್ರ ಮೋದಿ ಕೊಟ್ಟಿದ್ದಾರೆ. ಮೋದಿ ಗ್ರಾಮೀಣ ಭಾಗಕ್ಕೆ ಹೆಚ್ಚು ಆದ್ಯತೆ ಕೊಟ್ಟಿರುವುದು ಗಮನಾರ್ಹ ಸಂಗತಿ. 60 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ಕೊಡಲಾಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಗಳಿಗೆ ಚರ್ಚೆ ಮಾಡಲು ನೈಜ ವಿಷಯಗಳಿಲ್ಲ ಎಂದು ಹೇಳಿದರು.