ವಿಜಯಪುರ : ನಾಡಿಗೆ ಅನ್ನ ನೀಡುವ ರೈತರ ಮಕ್ಕಳ ಶಿಕ್ಷಣಕ್ಕಾಗಿ ಪದವಿ ಪೂರ್ವದಿಂದ ಸ್ನಾತಕೋತ್ತರವರೆಗೆ ವಿಷೇಶ ಶಿಷ್ಯವೇತನ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹೇಳಿದರು.
ಆಲಮಟ್ಟಿ ಲಾಲಬಹದ್ದೂರ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಶಿಷ್ಯ ವೇತನ ಯೋಜನೆಯಿಂದ ರಾಜ್ಯದ 18 ಲಕ್ಷದ ರೈತರ ಮಕ್ಕಳಿಗೆ ಅನುಕೂಲವಾಗಿದೆ. ಇದಕ್ಕಾಗಿ ಸರಕಾರ ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಾಗಿರಿಸಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ 5 ರಂದು ಎಲ್ಲ ಜಿಲ್ಲೆಯ 5 ಜನ ರೈತರ ಮಕ್ಕಳನ್ನು ಕರೆಯಿಸಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರೈತಾಪಿ ವರ್ಗ ಹವಾಮಾನದ ವೈಪರಿತ್ಯದ ನಡುವೆ ಬದುಕುತ್ತಿರುವುದರಿಂದ ಕೃಷಿಯೇ ಅವರ ಜೀವನಾಧಾರಿತವಾಗಿದ್ದು, ಗ್ರಾಮದ ಹಲವಾರು ಮನೆಗಳಲ್ಲಿ ಕೆಲವು ಮನೆಗಳು ಮಾತ್ರ ಸುಸಜ್ಜಿತವಾಗಿರುವದನ್ನು ಕಾಣುತ್ತಿದ್ದೇವೆ. ಅಂತಹ ಮನೆಯಲ್ಲಿ ಒಬ್ಬರಾದರೂ ಶಿಕ್ಷಣ ಹಾಗೂ ಕೌಶಲ್ಯದಿಂದ ಪ್ರಗತಿ ಹೊಂದಿರುತ್ತಾರೆ. ಆದ್ದರಿಂದ ಆರ್ಥಿಕ ಪ್ರಗತಿಗೆ ಶಿಕ್ಷಣ, ಕೌಲಶ್ಯ ಮಹತ್ವವಾಗಿದೆ ಎಂದು ತಿಳಿಸಿದರು. ಬಡವರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಸಂದ್ಯಾ ಸುರಕ್ಷಾ ಮತ್ತು ವಿಕಲಚೇತನರಿಗೆ ನೀಡುವ ಮಾಶಾಸನದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಬರುವ ಸೆಪ್ಟೆಂಬರದಿಂದ ಜಾರಿಗೆ ಬರಲಿದೆ.