ಬೆಂಗಳೂರು: ಕಾಂಗ್ರೆಸ್ ಪಕ್ಷವು ಪೆಗಾಸಸ್ ಗೂಢಚರ್ಯೆ ಆರೋಪವನ್ನು ಮುಂದಿಟ್ಟುಕೊಂಡು ಸಂಸತ್ತನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಸಂಸತ್ತನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಆರೋಪಿಸಿದರು.
ಬೆಂಗಳೂರು ಸಂಸದರಾದ ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರೊಂದಿಗೆ ಶನಿವಾರ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆಗಾಸಸ್ ಗೂಢಚರ್ಯೆ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಕೂಡ ‘ಟೂಲ್ ಕಿಟ್’ನಂತಹ ಪ್ರಯತ್ನದ ಭಾಗ. ಅದನ್ನೆ ಬಳಸಿಕೊಂಡು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಜುಲೈ 19 ರಿಂದಲೇ ಪ್ರಯತ್ನ ಆರಂಭಿಸಿತ್ತು. ಕೋವಿಡ್ ಬಿಕ್ಕಟ್ಟಿನ ನಡುವೆಯೂ ಸಂಸತ್ ಅಧಿವೇಶನಕ್ಕೆ ಒತ್ತಾಯಿಸಿದ್ದ ಕಾಂಗ್ರೆಸ್ ಮುಖಂಡರೇ ಈಗ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಪಲಾಯನವಾದದ ಪ್ರದರ್ಶನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ವಿರೋಧ ಪಕ್ಷಗಳು ಸಂಸತ್ ಅಧಿವೇಶನವನ್ನು ಸರಿಯಾಗಿ ಬಳಸಿಕೊಳ್ಳಬೇಕಿತ್ತು. ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ, ಕೋವಿಡ್ ಬಿಕ್ಕಟ್ಟು ಸೇರಿ ದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯ ಪಟ್ಟಿಯಲ್ಲಿದ್ದವು. ಹಿಂದೆ ರಫೇಲ್ ಹಗರಣದ ಹೆಸರಿನಲ್ಲಿ ಕಾಂಗ್ರೆಸ್ ಸದಸ್ಯರು ಸಂಸತ್ತಿನಲ್ಲಿ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದ್ದರು. ಈಗಲೂ ಅದೇ ರೀತಿ ಆಗುತ್ತಿದೆ ಎಂದರು.