ಬೀದರ್: ಜಿಲ್ಲೆಯಾದ್ಯಂತ ಭಾನುವಾರ ಬೆಳಗಿನಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಶನಿವಾರ ತಡರಾತ್ರಿ ಗುಡುಗು ಮಿಂಚಿನೊಂದಿಗೆ ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿತು. ನಸುಕಿನ ಜಾವ ಕೆಲಕಾಲ ಬಿಡುವು ಕೊಟ್ಟಿತು. ಪುನಃ ಆರಂಭಗೊಂಡ ಮಳೆ ಬಿಟ್ಟೂ ಬಿಡದೇ ಮಧ್ಯಾಹ್ನದವರೆಗೆ ಸುರಿಯಿತು.
ಭಾನುವಾರ ರಜಾ ದಿನವಾಗಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ನಿರಂತರ ಸುರಿದ ಮಳೆಗೆ ಜನರ ಓಡಾಟ ಇಲ್ಲದಂತಾಗಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ. ಇನ್ನು, ಕುಟುಂಬ ಸದಸ್ಯರೊಂದಿಗೆ ಬೆಳಿಗ್ಗೆ ಉದ್ಯಾನಗಳಿಗೆ ಹೋದವರು ಮಳೆ ನಿಲ್ಲುವ ಲಕ್ಷಣ ಕಾಣದೆ ಹಿಂತಿರುಗಿದರು.
ಜಿಲ್ಲೆಯ ಬೀದರ್, ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ, ಹುಲಸೂರ, ಕಮಲನಗರ, ಔರಾದ್, ಭಾಲ್ಕಿ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಜೂನ್, ಜುಲೈನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಆಗಸ್ಟ್ನಲ್ಲಿ ಮಳೆಯೇ ಆಗಿರಲಿಲ್ಲ. ಇದರಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳೆಗಳು ಒಣಗಲಾರಂಭಿಸಿದ್ದವು.
ಹಲವೆಡೆ ಖಾಸಗಿ ಟ್ಯಾಂಕರ್ಗಳ ಮೂಲಕ ಬೆಳೆಗಳಿಗೆ ನೀರುಣಿಸಿ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಈ ನಡುವೆ ರೈತ ಸಂಘಟನೆಗಳು, ಜನಪ್ರತಿನಿಧಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿಲು ಆಗ್ರಹಿಸಿದ್ದರು. ಆದರೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಯೆಲ್ಲೋ ಅಲರ್ಟ್ ಘೋಷಿಸಿತ್ತು. ಅದರ ಅನುಸಾರ ವರ್ಷಧಾರೆಯಾಗುತ್ತಿದೆ.