ಬೀದರ್: ತಾಲ್ಲೂಕಿನಾದ್ಯಂತ ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಮುಂಗಾರು ಮಳೆ ಕೊರತೆ ಹಾಗೂ ಸಗಟು ಪೂರೈಕೆಯ ಕುಸಿತದಿಂದ ಬೆಲೆ ಹೆಚ್ಚಳಗೊಂಡಿದೆ.
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಹಣ್ಣುಗಳ ಬೆಲೆಯೂ ಗಗನದತ್ತ ಮುಖ ಮಾಡಿದ್ದು, ಜ್ಯೂಸ್ಗೆ ಹೆಚ್ಚಾಗಿ ಬಳಕೆಯಾಗುವ ಕಿತ್ತಳೆ, ಸಪೋಟ, ಮೋಸಂಬಿ ದಾಳಿಂಬೆ ಹಣ್ಣುಗಳ ಬೆಲೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ.
ಟೊಮೊಟೊ ಕೆ.ಜಿಗೆ ₹ 30-50, ಬೀನ್ಸ್ ₹ 250-300, ಶುಂಠಿ 60-300, ದೊಣ್ಣೆ ಮೆಣಸಿನಕಾಯಿ ₹ 60-100 ಇದೆ. ಮಾರುಕಟ್ಟೆಯಲ್ಲಿ ಹಿರೇಕಾಯಿ ತೀವ್ರ ಕೊರತೆಯಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು ಸೇಬು ಕೆ.ಜಿಗೆ 180-230, ಡ್ರಾಗನ್ 80-130, ದಾಳಿಂಬೆ 100-180, ಏಲಕ್ಕಿಬಾಳೆ 80-100, ದ್ರಾಕ್ಷಿ 70-200 ಏರಿಕೆಯಾಗಿದೆ.
ಮಳೆ ಕೊರತೆಯಿಂದಾಗಿ ಸ್ಥಳೀಯವಾಗಿ ಬೆಳೆಯಲಾಗುತ್ತಿದ್ದ ಸೌತೆಕಾಯಿ, ಬದನೆ, ಈರುಳ್ಳಿಯೂ ಸ್ಥಗಿತಗೊಂಡಿದೆ. ಹಾಗಾಗಿ ಬಹುತೇಕ ತರಕಾರಿ ನೆರೆ ರಾಜ್ಯದ ಲಾತೂರ್, ನೀಲಂಗಾ ಸೇರಿ ಇತರ ಭಾಗಗಳಿಂದ ಪೂರೈಕೆಯಾಗುತ್ತಿದೆ.
‘ಕಳೆದ ವಾರ ತರಕಾರಿ ದರ ಕಡಿಮೆ ಇತ್ತು. ಸದ್ಯ ಸ್ಥಳೀಯ ತರಕಾರಿ ಬೆಳೆಯುತ್ತಿಲ್ಲ. ಇದರಿಂದ ಬೇರೆ ಕಡೆಯಿಂದ ಬೆಳಗಾವಿ, ದಾವಣಗೆರೆ ಧಾರವಾಡ ಸೇರಿ ಬೇರೆ ಬೇರೆ ಭಾಗದಿಂದ ತರಕಾರಿಗಳನ್ನು ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ₹ 30-50 ಹೆಚ್ಚಳವಾಗಿದೆ’ ಎಂದು ಇಲ್ಲಿನ ತರಕಾರಿ ವ್ಯಾಪಾರಿ ಮಲ್ಲಪ್ಪಾ ಮೊರಂಬಿ ತಿಳಿಸಿದರು.