ಉಡುಪಿ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥವನ್ನು ಇಂದು ಆಯೋಜಿಸಲಾಯಿತು.
ಬನ್ನಂಜೆಯ ನಾರಾಯಣಗುರು ಮಂದಿರದ ಆವರಣದಲ್ಲಿ ಜಾಥಕ್ಕೆ ಪಕ್ಕಿಬೆಟ್ಟು ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವಿಠಲ ಪೂಜಾರಿ, ಮಾಜಿ ನಗರಸಭೆ ಅಧ್ಯಕ್ಷೆ ಆನಂದಿ, ಜೀವರಕ್ಷಕ ಈಶ್ವರ ಮಲ್ಪೆ, ಸಮಾಜ ಸೇವಕ ಸತೀಶ್ ಸುವರ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಆನಂದಿ ಅವರು, ನಾರಾಯಣಗುರುಗಳ ಸಂದೇಶವನ್ನು ಅನುಸರಿಸುವುದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಿಟ್ಟೂರು ಬಾಳಿಗಾ ಫಿಶ್ನೆಟ್ನ ಜನರಲ್ ಮೆನೇಜರ್ ಚಂದ್ರಶೇಖರ್ ಸುವರ್ಣ, ಉದ್ಯಮಿಗಳಾದ ಭಾಸ್ಕರ್ ಜತ್ತನ್, ಪ್ರಭಾಕರ ಪೂಜಾರಿ, ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್, ಜಿಪಂ ಮಾಜಿ ಸದಸ್ಯರಾದ ಜನಾರ್ದನ ತೋನ್ಸೆ, ಗೀತಾಂಜಲಿ ಸುವರ್ಣ ಶುಭಹಾರೈಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಶು ಕಲ್ಮಾಡಿ, ಉಪಾಧ್ಯಕ್ಷರಾದ ವಿಜಯ ಕೋಟ್ಯಾನ್, ಎನ್.ಮಹೇಶ್ ಕುಮಾರ್, ಕೋಶಾಧಿಕಾರಿ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶರತ್ ಜತ್ತನ್ನ ಉಪಸ್ಥಿತರಿದ್ದರು. ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಸ್ವಾಗತಿಸಿದರು. ದಯಾನಂದ ಕರ್ಕೇರ ಉಗ್ಗೇಲ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಬನ್ನಂಜೆಯಿಂದ ಹೊರಟ ಜಾಥವು ಕಲ್ಸಂಕ ಮಾರ್ಗವಾಗಿ ಅಂಬಾಗಿಲು- ಸಂತೆಕಟ್ಟೆ- ನೇಜಾರು- ಕೆಮ್ಮಣ್ಣು- ಹೂಡೆ- ಗುಜ್ಜರಬೆಟ್ಟು- ವಡಭಾಂಡೇಶ್ವರ- ಮಲ್ಪೆ- ಕಲ್ಮಾಡಿ- ಕಿದಿಯೂರು- ಕಡೆಕಾರ್- ಕುತ್ಪಾಡಿ- ಸಂಪಿಗೆನಗರ- ಉದ್ಯಾವರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಟಪಾಡಿ ಶ್ರೀವಿಶ್ವನಾಥಕ್ಷೇತ್ರ ತಲುಪಿ ಗುರು ಪೂಜೆಯೊಂದಿಗೆ ಸಮಾಪನಗೊಂಡಿತು.