ಬೀದರ್: ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ರೀತಿಯ ಹೇಳಿಕೆ ನೀಡಿರುವ ಮಾಜಿ ಶಾಸಕರು ಕ್ಷಮೆ ಕೇಳುವುದು ಒಳ್ಳೆಯದು ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾಜಿ ಶಾಸಕ ಅಶೋಕ್ ಖೇಣಿರವರು ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಮಾಧ್ಯಮ ಮಿತ್ರರ ಕೇಳಿದ ಪ್ರಶ್ನೆಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಉತ್ತರಿಸಿದರು.
ಮಂದಿರ, ಮಸೀದಿ, ಚರ್ಚ್, ದರ್ಗಾಗಳು ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ ಮಾಡುವುದಿಲ್ಲ.
ಮಾಜಿ ಶಾಸಕರು ನೀಡಿರುವ ಹೇಳಿಕೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಿದೆ. ಸಂಬಂಧಿಸಿದ ಸಮುದಾಯಗಳಿಗೆ ಬಹಳಷ್ಟು ನೋವುಂಟಾಗುತ್ತದೆ.
ಸಾರ್ವಜನಿಕ ಜೀವನದಲ್ಲಿರುವ ನಾವು ನಮ್ಮ ನಡೆ ನುಡಿಗಳ ಮೇಲೆ ಗಮನ ಇಟ್ಟುಕೊಂಡು ಸಾಗಬೇಕಾಗುತ್ತದೆ.
ನಮ್ಮನ್ನು ಜನರು ಗಮನಿಸುತ್ತಿರುತ್ತಾರೆ. ನಮ್ಮಿಂದ ತಪ್ಪಾದ ಸಂದರ್ಭದಲ್ಲಿ ನಾವು ಕ್ಷಮೆ ಕೇಳಿ ಮುಂದೆ ಸಾಗುವುದು ಎಲ್ಲಕ್ಕಿಂತ ಒಳ್ಳೆಯದು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಜಿ ಶಾಸಕ ಅಶೋಕ್ ಖೇಣಿರವರಿಗೆ ಅವರ ಹೆಸರು ಪ್ರಸ್ತಾಪ ಮಾಡದೆಯೇ ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಬಹಳಷ್ಟು ಹಗುರವಾಗಿ ಮಾತನಾಡುವುದನ್ನು ನೋಡಿದರೆ ಅದು ಅವರ ಸಂಸ್ಕೃತಿಯನ್ನು ತೋರಿಸಿಕೊಡುತ್ತದೆ. ಅವರ ನಡತೆಯನ್ನು ತೋರಿಸುತ್ತದೆ. ಯಾರಾದರೂ ಸಣ್ಣವರು, ದೊಡ್ಡವರು ಆಗ್ತಾರೆ ಅಂದ್ರೆ ಅವರ ನಡತೆಯಿಂದ ಆಗ್ತಾರೆ. ಅವರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದು ಅವರ ಮಾತುಗಳಿಂದಲೇ ತಿಳಿಯುತ್ತದೆ.
ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.