ಬೀದರ್/ ಹುಮ್ನಾಬಾದ್: ಜಿಲ್ಲೆಯಲ್ಲಿ ಮಕರ ಸಂಕ್ರಮಣದ ಸಂದರ್ಭದಲ್ಲಿ ಎಳ್ಳು-ಬೆಲ್ಲ ಹಂಚುವುದು ಬಿಟ್ಟರೆ ಬೇರೆ ವಿಶಿಷ್ಟ ಆಚರಣೆಗಳಿರುವುದಿಲ್ಲ. ಪುಣ್ಯಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡುವ ಹಾಗೂ ತೋಟಗಳಲ್ಲಿ ಸಾಮೂಹಿಕ ಭೋಜನ ಸವಿಯುವ ಸಂಪ್ರದಾಯವೂ ಇಲ್ಲ.
ಅಂದು ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸುವುದು ಬಿಟ್ಟರೆ ಬೇರೆ ಧಾರ್ಮಿಕ ಕಾರ್ಯಗಳು ಇರುವುದಿಲ್ಲ. ಆದರೂ ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ತರಕಾರಿ ರಾಜ ಬದನೆಕಾಯಿ ಸಂಕ್ರಮಣದ ವೇಳೆ ಮೂರೂವರೆ ಪಟ್ಟು ಬೆಲೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದಾನೆ.
ಈರುಳ್ಳಿ, ಹೂಕೋಸು, ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್ ₹ 1 ಸಾವಿರ ಹೆಚ್ಚಾಗಿದೆ. ಬೆಂಡೆಕಾಯಿ, ನುಗ್ಗೆಕಾಯಿ ಪ್ರತಿ ಕೆಜಿಗೆ ₹ 120 ಹಾಗೂ ಹಿರೇಕಾಯಿ ₹ 80 ರಂತೆ ಮಾರಾಟವಾಗುತ್ತಿದೆ. ಎರಡು ವಾರಗಳಿಂದ ಇವುಗಳ ಬೆಲೆ ಕಡಿಮೆಯಾಗಿಲ್ಲ. ತರಕಾರಿ ರಾಜ ಮಾತ್ರ ಬೆಲೆ ಮಾರುಕಟ್ಟೆಯಲ್ಲಿ ಓವರ್ ಟೇಕ್ ಮಾಡಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದ್ದಾನೆ
ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಗಜ್ಜರಿ, ಬೀನ್ಸ್, ಟೊಮೆಟೊ, ಬೆಂಡೆಕಾಯಿ, ಹಿರೇಕಾಯಿ, ನುಗ್ಗೆಕಾಯಿ, ಡೊಣಮೆಣಸಿನ ಕಾಯಿ, ಚವಳೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಕರಿಬೇವು, ಕೊತಂಬರಿ, ಪಾಲಕ್, ಸಬ್ಬಸಗಿ ಬೆಲೆ ಸ್ಥಿರವಾಗಿದೆ.
‘ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ತಾಲ್ಲೂಕಿನಿಂದ ಬದನೆಕಾಯಿ ಮಾರುಕಟ್ಟೆಗೆ ಬಂದಿದೆ. ರೈತರಿಗೆ ಉತ್ತಮ ಆದಾಯವೂ ದೊರಕಿದೆ. ಬದನೆಕಾಯಿ ಬಿಟ್ಟರೆ ಬೇರೆ ತರಕಾರಿಗಳ ಬೆಲೆ ಹೆಚ್ಚಾಗಿಲ್ಲ. ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.
ಹೈದರಾಬಾದ್ನಿಂದ ಗಜ್ಜರಿ, ಚವಳೆಕಾಯಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೀನ್ಸ್, ಬೀಟ್ರೂಟ್, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ.