ಭಾಲ್ಕಿ: ಇಸ್ರೊ ವಿಜ್ಞಾನಿಗಳ ಕಾರ್ಯ ವೈಖರಿ, ಸಾಧನೆ ಜಗತ್ತಿಗೆ ಮಾದರಿ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ವಿಜ್ಞಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಚಂದ್ರಯಾನ-3 ಯಶಸ್ಸಿನಿಂದ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮೆರೆದದ್ದು ಇಸ್ರೊಜ್ಞಾನಿಗಳ ತಂಡ. ಅನೇಕ ದಶಕಗಳ ನಿರಂತರ ಪರಿಶ್ರಮದ ಫಲವಾಗಿ ಚಂದ್ರಯಾನ-3 ಯಶಸ್ಸು ಕಂಡಿದೆ. ಈ ಮಹತ್ತರ ಕಾರ್ಯದ ರೂವಾರಿಗಳು ಎಲ್ಲ ಕಾಲಕ್ಕೂ ಅಭಿನಂದನಾರ್ಹರು ಎಂದರು.
ಬಾಹ್ಯಾಕಾಶ ಸಂಸ್ಥೆಯ ಉಪನಿರ್ದೇಶಕ ಆರ್.ವಿ. ನಾಡಗೌಡ ಮಾತನಾಡಿ, ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಬಾಹ್ಯಾಕಾಶ ಕುರಿತಾಗಿ ಮಕ್ಕಳಲ್ಲಿ ಅರಿವು, ಆಸಕ್ತಿ ಮೂಡಿಸುವುದಕ್ಕಾಗಿ ಅಭಿಯಾನ ಕೈಗೊಳ್ಳಲಾಗಿದೆ. ಅಕ್ಟೋಬರ್ 10ರವರೆಗೆ 90 ರಾಷ್ಟ್ರಗಳಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರೇಮಠದಲ್ಲಿ ನಡೆಯುತ್ತಿರುವ ಅನ್ನ, ಜ್ಞಾನ ದಾಸೋಹದ ಕಾರ್ಯ ನಿಜಕ್ಕೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು.