ಬೀದರ್: ದಸರಾ ಹಬ್ಬದ ಅಂಗವಾಗಿ ವಾಯಾ ಕಲಬುರಗಿ ಮೂಲಕ ಬೀದರ್-ಬೆಂಗಳೂರು ನಡುವೆ ಮೂರು ವಿಶೇಷ ರೈಲುಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಅ. 20ರಂದು (ಶುಕ್ರವಾರ) ಗಾಡಿ ಸಂಖ್ಯೆ 06521 ರೈಲು ಯಶವಂತಪುರದಿಂದ ಬೀದರ್, ಮರುದಿನ ಅ. 21ರಂದು (ಶನಿವಾರ) ಗಾಡಿ ಸಂಖ್ಯೆ 06522 ಬೀದರ್ನಿಂದ ಯಶವಂತಪುರಕ್ಕೆ ಹೊರಡಲಿದೆ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 21ರಂದು ಗಾಡಿ ಸಂಖ್ಯೆ 06523 ಯಶವಂತಪುರದಿಂದ ಬೀದರ್, ಮರುದಿನ (ಅ.22) ಗಾಡಿ ಸಂಖ್ಯೆ 06524 ಬೀದರ್ನಿಂದ ಯಶವಂತಪುರಕ್ಕೆ ಚಲಿಸಲಿದೆ. ಅ. 23ರಂದು ಗಾಡಿ ಸಂಖ್ಯೆ 06505 ಯಲಹಂಕದಿಂದ ಬೀದರ್ ಕಡೆಗೆ, ಮರುದಿನ (ಅ.24) ಗಾಡಿ ಸಂಖ್ಯೆ 06506 ಬೀದರ್ನಿಂದ ಯಶವಂತಪುರಕ್ಕೆ ಪಯಣ ಬೆಳೆಸಲಿದೆ.
ಯಶವಂತಪುರ-ಬೀದರ್ ನಡುವೆ ಸಂಚರಿಸುವ ಎರಡು ರೈಲುಗಳು ರಾತ್ರಿ 11.15ಕ್ಕೆ ಯಶವಂತಪುರದಿಂದ ಹೊರಟು ಕಲಬುರಗಿ, ಕಮಲಾಪುರ, ಹುಮನಾಬಾದ್ ಮಾರ್ಗವಾಗಿ ಮರುದಿನ ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿವೆ. ಈ ರೈಲುಗಳು ಮಧ್ಯಾಹ್ನ 2.30ಕ್ಕೆ ಬೀದರ್ನಿಂದ ಹೊರಟು ಬಂದ ಮಾರ್ಗದಿಂದ ಮರುದಿನ ನಸುಕಿನ ಜಾವ 4 ಗಂಟೆ ಯಶವಂತಪುರ ಸೇರಲಿವೆ. ಇನ್ನೊಂದು ರೈಲು ರಾತ್ರಿ 11.15ಕ್ಕೆ ಯಲಹಂಕದಿಂದ ಹೊರಟು ಮರುದಿನ ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಬೀದರ್ನಿಂದ ಹೊರಟು ಮರುದಿನ ಬೆಳಗಿನ ಜಾವ 4ಕ್ಕೆ ಯಲಹಂಕ ತಲುಪಲಿದೆ ಎಂದು ತಿಳಿಸಿದ್ದಾರೆ.
‘ಈ ಹಿಂದೆ ಬಂದ್ ಆಗಿದ್ದ ಹುಮನಾಬಾದ್ ರಿಸರ್ವೇಶನ್ ಟಿಕೆಟ್ ಕೌಂಟರ್ ಎರಡು ದಿನಗಳಲ್ಲಿ ಪುನಃ ಆರಂಭಿವಾಗಲಿದೆ. ಇದರೊಂದಿಗೆ ಕಮಲಾಪುರದಲ್ಲೂ ಹೊಸದಾಗಿ ರಿಸರ್ವೇಶನ್ ಕೌಂಟರ್ ಆರಂಭಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಹಬ್ಬಕ್ಕೆ ಮೂರು ವಿಶೇಷ ರೈಲುಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ.