ಬೀದರ: ಬೀದರ-ಔರಾದ ಎನ್.ಎಚ್.161ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಗುರುವಾರ ಬೀದರ-ಔರಾದ ಎನ್.ಎಚ್.161ಎ ರಾಷ್ಟ್ರೀಯ ಹೆದಾರಿ ಕಾಮಗಾರಿ ಪರಿಶೀಲನೆ ಮತ್ತು ಮಾರ್ಗ ಮಧ್ಯೆ ಬರುವ ಗ್ರಾಮಗಳಾದ ಮರಕಲ್, ಜನವಾಡಾ ಹಾಗೂ ಕೌಠಾ ಬ್ರಿಡ್ಜ್ ಮತ್ತು ಔರಾದ ನಗರದಲ್ಲಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.
ಮರಕಲ್, ಜನವಾಡಾ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯ ಸೈಡ್ ಡ್ರೆನೆಜ್ಗಳನ್ನು ಇನ್ನಷ್ಟು ಉದ್ದ ಮಾಡಬೇಕೆಂದು ಸಚಿವರ ಗಮನಕ್ಕೆ ತಂದರು, ನಂತರ ಸಚಿವರು ಕೌಠಾ ಬ್ರಿಡ್ಜ್ ಕಾಮಗಾರಿ ಪರಿಶೀಲಿಸಿ ಇದರ ವೇಗವನ್ನು ಹೆಚ್ಚಿಸಬೇಕು ಸಾರ್ವಜನಿಕರ ಅನುಕೂಲಕ್ಕಾಗಿ ಆದಷ್ಟು ಬೇಗನೆ ದಾರಿ ಮಾಡಿಕೊಡಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೈಡ್ ಡ್ರೆನೆಜ್ಗಳ ಉದ್ದ ಹೆಚ್ಚಿಸಲು ಚೇಜ್ ಆಫ್ ಸ್ಕೋಪಗಳಲ್ಲಿ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸೈಡ್ ಡ್ರೆನ್ಗಳ ಉದ್ದ ಹೆಚ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಆದಷ್ಟು ಬೇಗನೆ ಕಾಮಗಾರಿ ವೇಗವನ್ನು ಹೆಚ್ಚಿಸಿ ಜನರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಬೇಕು ಅಂದಾಗ ಮಾತ್ರ ಜನರಿಗೆ ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಹೆದ್ದಾರಿಯ ಕೊನೆಯ ಭಾಗವಾದ ಮಹಾರಾಷ್ಟ ಗಡಿಯವರೆಗೂ ಹೋಗಿ ರಸ್ತೆಯ ಕುರಿತು ಸಾರ್ವಜನಿಕರು ಹೇಳಿದ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಹೆದ್ದಾರಿಯ ಬಗ್ಗೆ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು ಕಾಮಗಾರಿಯ ಗುಣಮಟ್ಟದಲ್ಲಿ ನಡೆಯಬೇಕು, ಸಂಬಂಧಿಸಿದ ಅಧಿಕಾರಿಗಳು ರಸ್ತೆಯ ಮೇಲೆ ನಿಂತು ಕೆಲಸ ಮಾಡಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಸಚಿವರು ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿಯ ವಿವೇಕ ಜೈಸ್ವಾಲ್, ಬೀದರ ಸಹಾಯಕ ಆಯುಕ್ತ ಲೋವಿಶ ಓರ್ಡಿಯಾ, ರಾಷ್ಟ್ರೀಯ ಹೆದ್ದಾರಿ ಕಲಬುರಗಿ ಪಿಡಿ ಅಜಯಮಣಿ, ರೆಸಿಡೆಂಟ್ ಇಂಜಿನೀಯರ ವಿನಯಕಾಂತ, ಮಹೇಶ ನಾಯ್ಡು, ಪ್ರೋಜೆಕ್ಟಮ್ಯಾನೇಜರ ಸಮೀರ ಪಾಶಾ, ಬೀದರ ಮತ್ತು ಔರಾದ ತಾಲೂಕಿನ ತಹಸೀಲ್ದಾರರು, ಶರಣಪ್ಪಾ ಪಂಚಾಕ್ಷರಿ, ಕುಮಾರ ದೇಶಮುಖ, ಅಣ್ಣಪ್ಪ ಖಾನಾಪೂರೆ, ಅಶೋಕ ಖೂಬಾ ಉಪಸ್ಥಿತರಿದ್ದರು.