ಚಿಟಗುಪ್ಪ: ತಾಲ್ಲೂಕಿನ ಬೇಮಳಖೇಡ ಗ್ರಾಮದಲ್ಲಿ ಆಗಸ್ಟ್ 17 ರಂದು ನಡೆದ ಬಾಲಕಿ ಭಾಗಮ್ಮ ( ಪ್ರಿಯಾಂಕಾ ) ಆತ್ಮಹತ್ಯೆ ಪ್ರಕರಣದಲ್ಲಿ ಕಿರುಕುಳ ನೀಡಿದ ಆರೋಪಿ ಯುವಕನನ್ನು ಬಂಧಿಸಲಾಗಿದೆ ಎಂದು ಹುಮನಾಬಾದ ಡಿವೈಎಸ್ಪಿ ಜೆ.ಎಸ್ . ನ್ಯಾಮೇಗೌಡರ್ ಮಾಹಿತಿ ನೀಡಿದ್ದಾರೆ.
ಬಾಲಕಿ ಆತ್ಮಹತ್ಯೆಗೆ ಯುವಕನಿಂದ ಜೀವ ಬೆದರಿಕೆ, ಹಣದಾಹ ಕಾರಣವೆಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ದೂರಿನನ್ವಯ ಬೇಮಳಖೇಡ ಗ್ರಾಮದ ಯುವಕ ಅಂಬರೀಶ ಸಿರಸಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಆರೋಪಿಯ ಹೇಳಿಕೆ ಪಡೆದು ಜೈಲಿಗೆ ಕಳಿಸಲಾಗಿದೆ.
ಪ್ರಕರಣವನ್ನು ಸಿಪಿಐ ಮಹೇಶಗೌಡ ಪಾಟೀಲ್ ಕೂಲಂಕುಷವಾಗಿ ನಿರ್ವಹಿಸುತ್ತಿದ್ದು ಸಮಗ್ರವಾಗಿ ತನಿಖೆ ಮಾಡಲಾಗುವುದು ಎಂದರು. ದೂರು ದಾಖಲಿಸಿಕೊಳ್ಳಲು ಬೇಮಳಖೇಡ ಪೊಲೀಸರು ವಿಳಂಬ ಮಾಡಿದ್ದಾರೆ ಎಂಬ ಆರೋಪ ತಳ್ಳಿಹಾಕಿದ ಡಿವೈಎಸ್ಪಿ ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ.
ಬಾಲಕಿಯ ಕುಟುಂಬದವರು ಹಾಗೂ ಸಮಾಜಬಾಂಧವರು ದೂರು ದಾಖಲಿಸಲು ಹಿಂಜರಿದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದರು.
ದೂರು ದಾಖಲಾದ ತಕ್ಷಣ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಸಾರ್ವಜನಿಕರು ಕಾನೂನುಭಂಗ ಸಮಸ್ಯೆಗಳನ್ನು ನೇರವಾಗಿ ಪೊಲೀಸರ ಗಮನಕ್ಕೆ ತರಬೇಕು ಎಂದ ನ್ಯಾಮೇಗೌಡರ್ ಯುವಜನತೆ ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಧೃಡಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದರು.