ಕಲಬುರಗಿ: ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈಗಾಗಲೇ ಎರಡು ದಿನಗಳಿಂದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿಯಲ್ಲಿ ಮಳೆಯಾಗುತ್ತಿದೆ. ಶನಿವಾರವೂ ಹಲವು ಕಡೆ ಮಳೆ ಸುರಿದಿದೆ. ನೈರುತ್ಯ ಮುಂಗಾರು ಹಲವು ಕಡೆ ಚುರುಕುಗೊಂಡಿದ್ದು ಭಾನುವಾರ ಹಾಗೂ ಸೋಮವಾರ ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹಮಾಮಾನ ಇಲಾಖೆ( IMD) ಮುನ್ಸೂಚನೆ ನೀಡಿದೆ. ಇದಲ್ಲದೇ ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿಯೂ ಮಳೆ ಸುರಿಯಲಿದೆ. ಕರ್ನಾಟಕ ಒಂದೆರಡು ಕಡೆ ಮುಂಚು ಸಹಿತ ಗುಡುಗಿನ ಸಾಧ್ಯತೆಯೂ ಇದೆ.
ಮಳೆ ಮುನ್ಸೂಚನೆ
ಕರ್ನಾಟಕದ ಕರಾವಳಿ ಭಾಗದಲ್ಲಂತೂ ನಿರಂತರವಾಗಿ ಮಳೆಯಾಗುತ್ತಲೇ ಇದೆ. ಇದೇ ರೀತಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಇದೇ ವಾತಾವರಣ ಮುಂದಿನ ಇಪ್ಪತ್ನಾಲ್ಕು ಹಾಗೂ ನಲವತ್ತೆಂಟು ಗಂಟೆಗಳವರೆಗೂ ಇರಲಿದೆ.
ಸೋಮವಾರ ಬೆಳಿಗ್ಗೆವರೆಗೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ. ಇದೇ ರೀತಿ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣಾ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರ ಜತೆಯಲ್ಲಿಯೇ ಬೀದರ್, ಕಲಬುರಗಿ, ಯಾದಗಿರಿಬಾಗಲಕೋಟೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಗಳಿವೆ.
ಇದೇ ರೀತಿ ಮಂಗಳವಾರ ಬೆಳಿಗ್ಗೆವರೆಗೆ ಕರಾವಳಿಯ ಬಹುತೇಕ ಭಾಗ ಹಾಗೂ ಉತ್ತರ ಒಳನಾಡಿನ ಕಲಬುರಗಿ, ಬೀದರ್, ಬಾಗಲಕೋಟೆ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣಾ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.