ಬೀದರ್: ನಗರದ ಗುಂಪಾ ಸಮೀಪದ ವಿಜಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿರುದ್ಧದ ದೂರಿನ ತನಿಖೆಗೆ ಆರು ಜನ ವೈದ್ಯರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ತಿಳಿಸಿದ್ದಾರೆ.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ್ವರ ಬಿರಾದಾರ ಅಧ್ಯಕ್ಷತೆಯಲ್ಲಿ ರಚಿಸಿರುವ ತನಿಖಾ ತಂಡದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ, ಬ್ರಿಮ್ಸ್ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಉಮಾ ದೇಶಮುಖ, ಫಿಜಿಶಿಯನ್ ಡಾ. ಬಸವರಾಜ ಗುಮ್ಮೆದ್, ಬ್ರಿಮ್ಸ್ ಅರವಳಿಕೆ ತಜ್ಞ ಸುಬೋಧ ಕೆ., ಬ್ರಿಮ್ಸ್ ಮಕ್ಕಳ ತಜ್ಞೆ ಡಾ. ಶಾಂತಲಾ ಕೌಜಲಗಿ ಇದ್ದಾರೆ.
‘ವಿಜಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನಾನು ಕಣ್ಣು ಕಳೆದುಕೊಂಡಿದ್ದೇನೆ. ಆರೋಗ್ಯ ತೀವ್ರ ಹದಗೆಟ್ಟಿದೆ. ಟೆಸ್ಟ್ ಟ್ಯೂಬ್ ಬೇಬಿ’ಗಾಗಿ ಕಳೆದ ಒಂದು ವರ್ಷದಿಂದ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ‘ಹೈಡೋಸ್’ ಇಂಜೆಕ್ಷನ್ ಕೊಟ್ಟಿರುವುದರಿಂದ ನನ್ನ ಕಣ್ಣುಗಳಿಗೆ ಹಾನಿಯಾಗಿದೆ. ಆರೋಗ್ಯದಲ್ಲಿ ಏರುಪೇರಾಗಿದೆ. ಚಿಕಿತ್ಸೆಗೆ ₹6 ರಿಂದ ₹7 ಲಕ್ಷ ವೆಚ್ಚವಾಗಿದೆ’ ಎಂದು ವಿಜಯಪುರದ ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ವಂದನಾ ನಾಗರಾಜ ಅವರು ಗುರುವಾರ (ಫೆ.29) ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು.
ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ವರ್ಷ ಕಳೆದರೂ ಟೆಸ್ಟ್ ಟ್ಯೂಬ್ ಬೇಬಿ ಆಗಿಲ್ಲ. ನನ್ನ ಆರೋಗ್ಯವೂ ಹಾಳಾಗಿದೆ. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಈಗ ತನಿಖೆಗೆ ಮುಂದಾಗಿದೆ.