ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿರುವ ಐದು ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಭೂಮಿ ಅಡಿಯಿಂದ ಕೇಳಿಬರುವ ಶಬ್ದದಿಂದಾಗಿ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ.
ಒಂದು ಶಬ್ದ ಕೇಳಿಬಂದರೆ ಸಾಕು ಭೂಕಂಪನವೆಂದು ಭಾವಿಸಿ ಮನೆಯೊಳಗಿದ್ದ ಜನರೆಲ್ಲರೂ ಹೊರಗೆ ಓಡಿ ಬರುತ್ತಿದ್ದಾರೆ. ಈ ನಡುವೆ ಸಂಭವಿಸಿದ ಭೂಕಂಪನ ದಿಂದಾಗಿ ಶ್ರೀಕಟನಳ್ಳಿ, ಹಿಲಾಲಪುರ, ವಡ್ಡನಕೇರಾ, ಸಕ್ಕರಗಂಜ್, ಮದರಗಾಂವ ಗ್ರಾಮಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ಭೂಮಿ ನಡುಗುವಂತಾದಾಗ ಜನರ ಮನೆಯಿಂದ ಹೊರ ಓಡಿಬರುತ್ತಿದ್ದಾರೆ. ಭೀತಿಗೊಳಗಾಗಿರುವ ಜನರನ್ನು ಭೇಟಿಯಾದ ಅಧಿಕಾರಿಗಳ ತಂಡ ಧೈರ್ಯ ತುಂಬುವ ಕೆಲಸ ಮಾಡಿದೆ.
ಹುಮ್ನಾಬಾದ್ ತಾಲೂಕಿನಲ್ಲಿರುವ ಶ್ರೀಕಟನಳ್ಳಿ, ಹಿಲಾಲಪುರ, ವಡ್ಡನಕೇರಾ, ಸಕ್ಕರಗಂಜ್, ಮದರಗಾಂವ ಗ್ರಾಮಗಳಲ್ಲಿ ಎರಡು ದಿನದ ಹಿಂದೆ 3.5 ತೀವ್ರತೆಯ ಭೂಕಂಪನವಾಗಿದ್ದು, ಭೂಮಿಯ 5 ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದೆ ಎಂದು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ