ಬೀದರ್: ಜಿಲ್ಲೆಯಲ್ಲಿ ಮುಖ್ಯಮಂತ್ರಿ ನಿಧಿ ಹಾಗೂ 15ನೇ ಹಣಕಾಸು ನಿಧಿ ಅನುದಾನ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಸಲ್ಲಿಸಿದರು.
ರಾಜ್ಯ ಸರ್ಕಾರ ಗ್ರಾಮಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಿಧಿ ಹಾಗೂ 15ನೇ ಹಣಕಾಸು ನಿಧಿ ಅಡಿಯಲ್ಲಿ ಪ್ರತಿ ತಾಲ್ಲೂಕು ಪಂಚಾಯಿತಿಗೆ ಅನುದಾನ ಒದಗಿಸುತ್ತಿದೆ. ಜಿಲ್ಲೆಯಲ್ಲಿ 2021 ರಿಂದ ಈವರೆಗೆ ಅನುದಾನ ದುರ್ಬಳಕೆಯಾಗಿದೆ. ಅಧಿಕಾರಿಗಳು ಹಳೆಯ ಕಾಮಗಾರಿಗಳನ್ನೇ ತೋರಿಸಿ ಹಣ ಎತ್ತಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿದರು.
ತನಿಖಾ ತಂಡ ರಚಿಸಿ ಎರಡೂ ಅನುದಾನಗಳ ಕಾಮಗಾರಿಗಳ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಸೋಮನಾಥ ಮುಧೋಳ ಎಚ್ಚರಿಕೆ ನೀಡಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸೋಮಶೇಖರ ಸಜ್ಜನ್, ದತ್ತಾತ್ರೇಯ ಅಲ್ಲಂಕೇರೆ, ಪ್ರಧಾನ ಕಾರ್ಯದರ್ಶಿ ನವೀನ್ ಬುಧೇರಾ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ವೀರಶೆಟ್ಟಿ ಗೌಸಪುರ, ಅನಿಲ್ ಹೇಡೆ, ಸಚಿನ್ ತಿಪಶೆಟ್ಟಿ, ಪ್ರಮುಖರಾದ ವಿನಾಯಕ ರೆಡ್ಡಿ, ಉದಯಕುಮಾರ ಅಷ್ಟೂರೆ, ವಿಶ್ವನಾಥ ಅಲ್ಲೂರೆ, ಸಿದ್ದು ರಾಜೇಶ್ವರ, ಶಿವರಾಜ ರೆಡ್ಡಿ, ಸುನೀಲ್ ಬರಿದಾಬಾದ್, ದಶರಥ ಮನ್ನಳ್ಳಿ, ಪ್ರಭು ಯಾಕತಪುರ, ಅಶೋಕ ಪೂಜಾರಿ, ತುಕಾರಾಮ ಜಮಾದಾರ್, ವಿವೇಕ ನಿರ್ಮಳೆ, ಚಂದು ಡಿ.ಕೆ, ಸಂತೋಷ ಚೌಹಾಣ್, ಸಂಗಮೇಶ ದ್ಯಾಡೆ ಪಾಲ್ಗೊಂಡಿದ್ದರು.