ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ಮಹಾತ್ಮಗಾಂಧೀಜಿಯ ಜನ್ಮದಿನವಾದ ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದಲ್ಲಿ ಉದ್ಘಾಟಿಸುವರು ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಶುಕ್ರವಾರ ನಗರದ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅ. 2, 3ರಂದು ಎರಡು ದಿನ ಕಾರ್ಯಕ್ರಮ ಆಚರಿಸಲಾಗುವುದು. ವಿಜಯನಗರ ರಚನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಹಾಲಿ, ಮಾಜಿ ಶಾಸಕ, ಸಚಿವರನ್ನು ಆಹ್ವಾನಿಸಲಾಗುತ್ತದೆ. ಸರಳ-ವಿಜೃಂಭಣೆಯ ನಡುವೆ ಕಾರ್ಯಕ್ರಮ ಜರುಗಲಿದೆ. ಹೆಚ್ಚು ಎಲ್ ಇಡಿ ಪರದೆ ಅಳವಡಿಸಿ ಜನ ಸೇರದಂತೆ ನೋಡಲಾಗುವುದು ಎಂದರು.
ಅ. 2ರ ನಂತರ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಆರಂಭಿಸಲಾಗುವುದು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಗೆ ವೇಗ ಕೊಡಲಾಗುವುದು ಎಂದು ವಿವರಿಸಿದರು.