ಕಲಬುರಗಿ: ಕಲಬುರಗಿ ಜಿಲ್ಲೆಯ ಅಮರ್ಜಾ, ಬೆಣ್ಣೆತೋರಾ, ಭೀಮಾ ಏತ ನೀರಾವರಿ, ಚಂದ್ರಂಪಳ್ಳಿ, ಗಂಡೋರಿ ನಾಲಾ ಹಾಗೂ ಲೋವರ್ ಮುಲ್ಲಾಮಾರಿ ನೀರಾವರಿ ಯೋಜನೆಗಳಿಂದ ಅಚ್ಚುಕಟ್ಟು ಪ್ರದೇಶಗಳ ಕಾಲುವೆಯ ಕೊನೆಯ ರೈತನ ಜಮೀನಿಗೂ ಲಭ್ಯವಾಗುವಂತೆ ನೀರು ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಗುರುವಾರ ಕಮಲಾಪೂರ ತಾಲೂಕಿನ ಬೆಳಕೋಟಾ ಗ್ರಾಮದಲ್ಲಿರುವ ಗಂಡೋರಿ ನಾಲಾ ಆಣೆಕಟ್ಟೆಗೆ ಭೇಟಿ ನೀಡಿ ಪರಿವೀಕ್ಷಣೆ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂಬಂಧ ಕಲಬುರಗಿಯಲ್ಲಿ ಪ್ರತ್ಯೇಕವಾಗಿ ಕೆ.ಎನ್.ಎನ್.ಎಲ್ ಅಧಿಕಾರಿಗಳ ಸಭೆ ಕರೆದು ಆಣೆಕಟ್ಟು ವ್ಯಾಪ್ತಿಯಲ್ಲಿನ ಕಾಲುವೆ ದುರಸ್ತಿ ಸೇರಿದಂತೆ ಕೊನೆ ರೈತನ ಹೊಲಕ್ಕೂ ನೀರು ಹರಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಗಂಡೋರಿ ನಾಲಾ ಯೋಜನೆಯಿಂದ 7900 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಉದ್ದೇಶವಿದ್ದು, ಮಧ್ಯದಲ್ಲಿ ಕಾಲುವೆ ಒಡೆದ ಕಾರಣ 5000 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರು ಹೋಗುತ್ತಿದೆ. ಕೂಡಲೆ ಕಾಲುವೆ ದುರಸ್ತಿಪಡಿಸಿ ಕೊನೆ ಹಂತದ ರೈತನಿಗೂ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಕಾಲುವೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಸಂಬಂಧ ತನಿಖೆ ಮಾಡಿ ವರದಿ ನೀಡಲು ನೀರಾವರಿ ನಿಗಮದ ಎಂ.ಡಿ. ಅವರಿಗೆ ಸೂಚನೆ ನೀಡಿದ್ದು, ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಗ್ರಾಮಸ್ಥರ ಕೋರಿಕೆಯಂತೆ ಆಣೆಕಟ್ಟಿನಿಂದ ಮಹಾಗಾಂವ ವರೆಗಿನ 4 ಕಿ.ಮಿ. ರಸ್ತೆ ನಿರ್ಮಿಸಲಾಗುವುದು ಎಂದ ಸಚಿವರು ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮುಂದೆ ಬಂದಲ್ಲಿ ಜಾಗ ನೀಡಲಾಗುವುದು ಎಂದರು.
2011-12ರಲ್ಲಿಯೆ ಕೃಷಿ ಮೇಲ್ದಂಡೆ ಯೋಜನೆಯ ಮೂರನೇ ಸ್ಟೇಜಿನ ಮೊದಲನೇ ಹಂತದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿದರೂ ತದನಂತರ ಬಂದ ಸರ್ಕಾರಗಳು ಹೆಚ್ಚಿನ ಗಮನ ಹರಿಸದ ಕಾರಣ ಯೋಜನೆ ನೆನೆಗುದ್ದಿಗೆ ಬಿದ್ದಿದೆ.
ಅರಂಭದಲ್ಲಿ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕೆ 17200 ಕೋಟಿ ರೂ. ಅಂದಾಜಿಸಿತ್ತಾದರು ಪ್ರಸ್ತುತ ಇದು 65000 ಕೋಟಿ ರೂ.ಗೆ ಪರಿಷ್ಕರಣೆಗೊಂಡಿದೆ. 7 ಜಿಲ್ಲೆಗಳ 15 ಲಕ್ಷ ಎಕರೆ ಪ್ರದೇಶಗಳಿಗೆ ನೀರಾವರಿ ಒದಗಿಸುವ ಈ ಯೋಜನೆಗೆ ಆರಂಭಿಕವಾಗಿ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ನಮ್ಮ ಸರ್ಕಾರ ಮೊದಲ ಅದ್ಯತೆ ನೀಡಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2500 ಕೋಟಿ ರೂ. ಮಂಜೂರಾತಿ ನೀಡಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
3 ದಿನದಲ್ಲಿ ದುರಸ್ತಿ ಮಾಡಿ
ಗಂಡೋರಿ ನಾಲಾ ವೀಕ್ಷಣೆ ವೇಳೆ ರಸ್ತೆ, ವಿದ್ಯುತ್ ಕಂಬಗಳನ್ನು ಕೆಟ್ಟುಹೋಗಿದ್ದಕ್ಕೆ ಮತ್ತು ಸರಿಯಾಗತಿ ನಿರ್ವಹಣೆ ಮಾಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮೂರು ದಿನದಲ್ಲಿ ದುರಸ್ತಿ ಮಾಡಿ ವರದಿ ನೀಡಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತ ಸೂರ್ಯಕಾಂತ ಮಾಲೆ ಅವರಿಗೆ ಸಚಿವರು ಸೂಚನೆ ನೀಡಿದರು.
ಈ ಸಂದರ್ಭ ಸಂಸದ ಡಾ. ಉಮೇಶ ಜಾಧವ, ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ,ಡಾ. ಅವಿನಾಶ ಜಾಧವ,ಬಿ.ಜಿ.ಪಾಟೀಲ, ಶರಣಪ್ಪ ತಳವಾರ, ಹರ್ಷವರ್ಧನ ಗು. ಗುಗಳ, ಮಲ್ಲಿಕಾರ್ಜುನ ಗುಂಗೆ, ಮತ್ತಿತರು ಇದ್ದರು.