ಚಿಕ್ಕಮಗಳೂರು: ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿಯಿತು. ಸುಮಾರು ಅರ್ಧಗಂಟೆ ಕಾಲ ಬಿರುಸಿನ ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ಥಗೊಂಡಿತು.
ಬೆಳಗಿನಿಂದ ಉರಿ ಬಿಸಿಲು ಇತ್ತಾದರೂ ಮಧ್ಯಾಹ್ನ 3.15 ರ ವೇಳೆಗೆ ಕಪ್ಪಿಟ್ಟ ಮೋಡ ಗುಡುಗಿನೊಂದಿಗೆ ಮಲೆಯಾಗಿ ಸುರಿಯಲಾರಂಭಿಸಿತು. ಇದರ ಪರಿಣಾಮ ನಗರದ ಪ್ರಮುಖ ರಸ್ತೆಗಳ ಮೇಲೆ ಹೊಳೆಯಂತೆ ನೀರು ಹರಿಯಲಾರಂಭಿಸಿತು.
ಮಲ್ಲಂದೂರು ರಸ್ತೆ, ಶೃಂಗಾರ್ ಸರ್ಕಲ್, ಜ್ಯೋತಿ ವೃತ್ತ ಸೇರಿದಂತೆ ತಗ್ಗು ಪ್ರದೇಶವಾದ ಪಂಪಾ ನಗರ, ಲಕ್ಷ್ಮೀಶ ನಗರ, ಟಿಪ್ಪು ನಗರ, ಶಂಕರಪುರ, ಶಾಂತಿ ನಗರ ಇತರೆ ಬಡಾವಣೆಗಳಿಗೆ ಭಾರೀ ಪ್ರಮಾಣದಲ್ಲಿ ಕೊಳಚೆ ನೀರು ನುಗ್ಗಿ ಜನ ಪರದಾಡುವಂತಾಯಿತು.
ಆಮೆಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಕಾಮಗಾರಿಯಿಂದಾಗಿ ಹಲವೆಡೆ ಛೇಂಬರ್ಗಳು ಸರಿಯಾಗಿ ಕೆಲಸ ಮಾಡದೆ ನೀರು ರಸ್ತೆ ಮೇಲೆ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಜ್ಯೋತಿ ಸರ್ಕಲ್ನಲ್ಲಿ ಮ್ಯಾನ್ಹೋಲ್ವೊಂದು ಉಕ್ಕಿ ಹರಿದ ಪರಿಣಾಮ ರಸ್ತೆಯೆಲ್ಲಾ ಕೊಳಚೆಯಿಂದಾಗಿ ದುರ್ವಾಸನೆ ಬೀರುವಂತಾಯಿತು. ಈ ರೀತಿಯ ದೃಶ್ಯಗಳು ಅಲ್ಲಲ್ಲಿ ಕಂಡುಬಂತು ನಗರಸಭೆ ವಿರುದ್ಧ ಜನರು ಹಿಡಿಶಾಪವನ್ನೂ ಹಾಕಿದರು.
ನಗರದಲ್ಲಿ ಹಾದುಹೋಗಿರುವ ರಾಜಕಾಲುವೆಗಳು, ದೊಡ್ಡ ಚರಂಡಿಗಳನ್ನು ಹಲವು ತಿಂಗಳಿನಿಂದ ಶುಚಿಗೊಳಿಸದಿರುವುದು, ವರ್ಷಗಳಿಂದ ತುಂಬಿದ ಹೂಳನ್ನು ತೆಗೆಯದಿರುವ ಕಾರಣ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ಕೊಳಕೆಲ್ಲವೂ ಮಳೆನೀರಿನೊಂದಿಗೆ ಬಡಾವಣೆಗಳಿಗೆ ನುಗ್ಗಿ ತೊಂದರೆ ಅನುಭವಿಸುವಂತಾಯಿತು. ಇನ್ನೆರಡು ತಿಂಗಳು ಅಡ್ಡಮಳೆಗಳು ಭಾರೀ ಪ್ರಮಾಣದಲ್ಲಿ ಸುರಿಯುವ ಹಿನ್ನೆಲೆಯಲ್ಲಿ ನಗರಸಭೆ ಕೂಡಲೇ ಚರಂಡಿಗಳನ್ನು ಶುಚಿಗೊಳಿಸಿ, ಹಾಳಾಗಿರುವ ಒಳಚರಂಡಿ ಛೇಂಬರ್ಗಳನ್ನು ದುರಸ್ಥಿಪಡಿಸಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ.