ಕಲಬುರಗಿ: ವಿವಿಧ ಸಂಸ್ಥೆಗಳು ಪ್ರಕಟಿಸಿರುವ ಮತಗಟ್ಟೆ ಸಮೀಕ್ಷೆಗಳು ಹಿಂದೆಯೂ ಸುಳ್ಳಾಗಿದ್ದವು. ಅಖಿಲ ಭಾರತ ಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟ 295ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್ಗೆ 18 ಸ್ಥಾನಗಳು ಬರಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಹೇಳಿರಲಿಲ್ಲ. ಬದಲಾಗಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದಿದ್ದವು.
ಫಲಿತಾಂಶ ಬಂದ ಮೇಲೆ ಆಗಿದ್ದೇನು? ಕಾಂಗ್ರೆಸ್ ಪಕ್ಷ 136 ಸ್ಥಾನಗಳಲ್ಲಿ ಜಯಗಳಿಸಿತ್ತು. ಆಗಲೂ ನಮಗೆ 125 ಸ್ಥಾನಗಳಾದರೂ ಬರುತ್ತವೆ ಎಂಬ ವಿಶ್ವಾಸವಿತ್ತು. ಮಾಧ್ಯಮಗಳ ಮತಗಟ್ಟೆ ಸಮೀಕ್ಷೆಗಳಿಗಿಂತ ನಮಗೆ ಜನರ ಮತಗಟ್ಟೆ ಸಮೀಕ್ಷೆಯ ಮೇಲೆ ಹೆಚ್ಚಿನ ವಿಶ್ವಾಸವಿದೆ. ಇನ್ನು 48 ಗಂಟೆಗಳಲ್ಲಿ ಫಲಿತಾಂಶವೇ ಹೊರಬೀಳಲಿದೆ ಎಂದರು.
ಬಿಜೆಪಿ ಮೊದಲಿನಿಂದಲೂ 400 ಪಾರ್ ಎಂದು ಹೇಳುತ್ತಾ ಬಂದಿದೆ. ಅಷ್ಟು ಸೀಟುಗಳ ಬಂದರೆ ಸಂವಿಧಾನವನ್ನು ಬದಲಿಸುವುದು ಸುಲಭ ಎಂದು ಆ ಪಕ್ಷದ ಮುಖಂಡರು ಹೇಳಿದ್ದರು. ನಮ್ಮ ಅಂದಾಜಿನ ಪ್ರಕಾರ ಬಿಜೆಪಿ 230 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂದು ಹೇಳಿದರು.