ಕಲಬುರಗಿ: ಸಂವಿಧಾನದ 371 (ಜೆ ) ಜಾರಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಜನರಿಗೆ ತಪ್ಪು ಸಂದೇಶ ನೀಡಲು ಬೆಂಗಳೂರಿನಲ್ಲಿ ಕೆಲವರು ಪ್ರತಿಭಟನೆ ನಡೆಸಿ, ಈ ಭಾಗದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದ್ದು, ಅದಕ್ಕೆ ಪ್ರತಿಯಾಗಿ ಇಂದು ಕಲಬುರಗಿಯಲ್ಲಿ ಬೃಹತ್ ಹೋರಾಟ ಪ್ರತಿಭಟನೆ ನಡೆಯಿತು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಹಾಗೂ ಎಚ್ ಕೆ ಇ ಅಧ್ಯಕ್ಷ ಶಶಿಲ್ ಜಿ.ನಮೋಶಿ ನೇತೃತ್ವದಲ್ಲಿ ಇಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಂತರ ಮಾತನಾಡಿದ ಅವರು ಸಂವಿಧಾನದ 371 (ಜೆ) ಜಾರಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ತಪ್ಪು ಸಂದೇಶ ಹರಡುವುದು ಮತ್ತು ಈ ಭಾಗದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನಗಳ ವಿರುದ್ಧ ನಮ್ನ ಹೋರಾಟ ನಡೆಯಲಿದೆ ಎಂದು ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರದ ಹಲವು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಹೋರಾಟಗಾರರು, ಕನ್ನಡ ಪರ ಸಂಘಟನೆಗಳು,ಅಕಾಡೆಮಿಗಳ ಸದಸ್ಯರು 371(ಜೆ) ಕಲಂ ಬೆಂಬಲಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು 371( ಜೆ) ಕಲಂ ವಿರೋಧಿ ಬೆಂಗಳೂರಿನಲ್ಲಿ ಜೂ.1 ರಂದು ನಡೆಸುತ್ತಿರುವ ಹೋರಾಟಕ್ಕೆ ಧಿಕ್ಕಾರ ಹೇಳಿದರು.
ಕೂಡಲೇ ಸರಕಾರ ಮಧ್ಯ ಪ್ರವೇಶ ಮಾಡಬೇಕು. 30 ವರ್ಷಗಳ ಸತತ ಹೋರಾಟ ಫಲವಾಗಿ ನಮ್ಮ ಭಾಗಕ್ಕೆ ನ್ಯಾಯ ಸಿಕ್ಕಿದೆ. ಆದರೂ, ಆದನ್ನು ಸರಿಯಾಗಿ ಪ್ರಮಾಣದಲ್ಲಿ ನಾವು ಪಡೆಯಲು ಇನ್ನೂ ಕೆಲವು ಕಾನೂನು ತೊಡಕು, ಸರಕಾರದ ಅಧಿಕಾರಿಗಳ ಇಚ್ಛಾಶಕ್ತಿ ಪ್ರದರ್ಶನದ ಕೊರತೆಯಿಂದಾಗಿ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎನ್ನುವುದು ಖೇದಕರ ಸಂಗತಿ ಎಂದು ಎಂಎಲ್ಸಿ ಶಶೀಲ್ ನಮೋಶಿ, ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ,
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರೊ.ಆರ್.ಕೆ.ಹುಡಗಿ, ಬಸವರಾಜ ಕುಮನೂರು, ಅಸಾದ ಅನ್ಸಾರಿ ಸೇರಿದಂತೆ ಆನೇಕರು ಹೋರಾಟದ ನೇತೃತ್ವವಹಿಸಿ ಬೆಂಗಳೂರಿನ ಹಸಿರು ಪ್ರತಿಷ್ಠಾನ ಅರಂಭಿಸಿರುವ ಖ್ಯಾತೆ ಖಂಡಿಸಿದರು.ಆಲ್ಲದೆ, ಈ ರೀತಿಯ ವಿರೋಧ ಭವಿಷ್ಯದಲ್ಲಿ ಕರ್ನಾಟಕ ಇಬ್ಭಾಗವಾಗಲು ಕಾರಣವಾಗಬಹುದು ಎನ್ನುವ ಸಂದೇಶವನ್ನು ರವಾನಿಸಿ, ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಇರುವ ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖಂಡರು ಹಾಗೂ ಎಲ್ಲ ರಾಜಕಿಯ ಪಕ್ಷಗಳ ಮುಖಂಡರು,, ವಿವಿಧಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.